ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ವಿಚಾರಣೆ ಎಂಬುದು ಎಂಥ ನಾಟಕದ ಸಂಗತಿ ಎಂಬುದು ಮತ್ತೆ ಬಹಿರಂಗವಾಗಿದೆ. ಉಗ್ರಗಾಮಿ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಜಮಾತ್-ಉದ್-ದವಾಹ್ ನ ಆರು ಮಂದಿಗೆ ಒಂಬತ್ತು ವರ್ಷಗಳ ಜೈಲುವಾಸ ವಿಧಿಸಿತ್ತು.
ಅಲ್ಲಿನ ಕೆಳಹಂತದ ನ್ಯಾಯಾಲಯ. ಆ ತೀರ್ಪನ್ನು ಶನಿವಾರ ಪಾಕಿಸ್ತಾನದ ಲಾಹೋರ್ ಹೈ ಕೋರ್ಟ್ ರದ್ದುಗೊಳಿಸಿ, ಜಮಾತ್ ಸದಸ್ಯರನ್ನು ದೋಷಮುಕ್ತರನ್ನಾಗಿಸಿದೆ.
ಮುಂಬೈ ದಾಳಿಯ ಪ್ರಮುಖ ಸಂಚುಕೋರ ಹಾಗೂ ವಿಶ್ವಸಂಸ್ಥೆಯಿಂದಲೇ ಅತಿಬೇಕಾದ ಉಗ್ರ ಎಂಬ ಪಟ್ಟ ಹೊತ್ತಿರುವ ಹಫೀಜ್ ಸಯೀದ್ ಸ್ಥಾಪಿಸಿರುವ ಸಂಘಟನೆ ಜಮಾತ್-ಉದ್-ದವಾಹ್. ಆದರೆ ಏಪ್ರಿಲ್ 2021ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯ ತೀರ್ಪನ್ನು ತಿರುಗಿಸುವುದರಲ್ಲಿ ಪಾಕಿಸ್ತಾನದ ನ್ಯಾಯವ್ಯವಸ್ಥೆಗೆ ತುಂಬ ಸಮಯವೇನೂ ಹಿಡಿಯಲಿಲ್ಲ.
ಪ್ರೊಫೆಸರ್ ಮಲಿಕ್ ಜಾಫರ್ ಇಕ್ಬಾಲ್, ಯಾಹ್ಯಾ ಮುಜಾಹಿದ್, ನಸ್ರುಲ್ಲಾ, ಸಮೀವುಲ್ಲಾ ಮತ್ತು ಉಮರ್ ಬಹದ್ದೂರ್ಗೆ ಒಂಬತ್ತು ವರ್ಷ ಜೈಲು ಶಿಕ್ಷೆ, ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿಗೆ ಆರು ತಿಂಗಳ ಜೈಲು ಶಿಕ್ಷೆ ನೀಡಲಾಗಿತ್ತು.