ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಏಪ್ರಿಲ್ 1ರಂದು ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ಮಂಗಳವಾರ ತಡರಾತ್ರಿ ಹಿಂಪಡೆದಿದ್ದಾರೆ.
. ಏಪ್ರಿಲ್ 3 ರಂದು ಬೃಹತ್ ಪ್ರಮಾಣದ ಪ್ರತಿಭಟನೆಗಳನ್ನು ಯೋಜಿಸಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾಕ್ರಮವಾಗಿ ಈ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಲಾಗಿತ್ತು.
ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ದೇಶದಲ್ಲಿ ಯಾವುದೇ ಗೊಂದಲವನ್ನು ತಡೆಯಲು ಭದ್ರತಾ ಪಡೆಗಳಿಗೆ ವ್ಯಾಪಕ ಅಧಿಕಾರವನ್ನು ನೀಡಿದ್ದ ತುರ್ತು ನಿಯಮಗಳ ಸುಗ್ರೀವಾಜ್ಞೆಯನ್ನು ಹಿಂಪಡೆದಿರುವುದಾಗಿ ಅಧ್ಯಕ್ಷರು ಹೇಳಿದ್ದಾರೆ.
ಏಪ್ರಿಲ್ 1ರಂದು, ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದದಿದ್ದರಿಂದ ಅಧ್ಯಕ್ಷ ರಾಜಪಕ್ಸ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.
ನಂತರ, ಸರ್ಕಾರವು ದ್ವೀಪ ರಾಷ್ಟ್ರದಾದ್ಯಂತ ಕರ್ಫ್ಯೂ ವಿಧಿಸಿತ್ತು. ಕರ್ಫ್ಯೂ ಮತ್ತು ತುರ್ತು ಪರಿಸ್ಥಿತಿಯ ಹೊರತಾಗಿಯೂ ಪ್ರತಿಭಟನೆಗಳು ಮುಂದುವರಿದಿದ್ದವು, ಆಡಳಿತ ಪಕ್ಷದ ಹಿರಿಯ ನಾಯಕರ ಮನೆಗಳನ್ನು ಸುತ್ತುವರಿದಿದ್ದ ಪ್ರತಿಭಟನಾಕಾರರು ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದ್ದರು.
ಆದರೆ, ರಾಜಪಕ್ಸ ಅವರು ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದರು. ವಿದೇಶಿ ವಿನಿಮಯ ಬಿಕ್ಕಟ್ಟು ನಮ್ಮ ನಿರ್ಧಾರಗಳಿಂದ ಆದದ್ದಲ್ಲ. ಕೊರೊನಾದಿಂದ ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಆದಾಯ ಮತ್ತು ಆಂತರಿಕ ಹಣದ ವಹಿವಾಟು ಕುಸಿದಿದೆ ಎಂದು ಹೇಳಿದ್ದರು.