ನವದೆಹಲಿ: ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸಂಸದ ಮನಮೋಹನ್ ಸಿಂಗ್, ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಮತ್ತು ರಾಜ್ಯಸಭಾ ಸದಸ್ಯ ಶಿಬು ಸೊರೆನ್ ಮತ್ತು ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಮಂಗಳವಾರ ಸೆಂಟ್ರಲ್ ಹಾಲ್ನಲ್ಲಿ ನಡೆಯುವ ಸಮಾರಂಭದಲ್ಲಿ ಮಾತನಾಡುವ ಸಾಧ್ಯತೆಯಿದೆ. ಹಳೆಯ ಕಟ್ಟಡದಲ್ಲಿ ಸಂಸತ್ತಿನ ಕಲಾಪ ಮುಕ್ತಾಯಗೊಂಡ ಬಳಿಕ ಮಂಗಳವಾರ ಮಧ್ಯಾಹ್ನ 1:15 ರಿಂದ ಹೊಸ ಸಂಸತ್ತಿನ ಕಟ್ಟಡದಲ್ಲಿ ಉಭಯ ಸದನಗಳ ಕಲಾಪಗಳು ಪ್ರಾರಂಭವಾಗುತ್ತವೆ.
ಮೂಲಗಳ ಪ್ರಕಾರ, ಬೆಳಿಗ್ಗೆ 9:30 ಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರ ಗುಂಪು ಫೋಟೋ ಸೆಷನ್ ನಂತರ, 11 ಗಂಟೆಗೆ ಸೆಂಟ್ರಲ್ ಹಾಲ್ನಲ್ಲಿ “ಭಾರತದ ಸಂಸತ್ತಿನ ಪರಂಪರೆ ಎಂಬ ಶೀರ್ಷಿಕೆಯ ಕಾರ್ಯಕ್ರಮ ನಡೆಯಲಿದೆ. ರಾಜ್ಯಸಭೆಯ ಹಿರಿಯ ಸಂಸದರಾಗಿರುವ ಮನಮೋಹನ್ ಸಿಂಗ್ ಮತ್ತು ಲೋಕಸಭೆಯಲ್ಲಿ ಅತಿ ಹಿರಿಯ ಸಂಸದರಾಗಿರುವ ಮೇನಕಾ ಗಾಂಧಿ ಅವರಿಗೆ ಸಮಾರಂಭದಲ್ಲಿ ಮಾತನಾಡುವ ಗೌರವ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಉಪಾಧ್ಯಕ್ಷ ಜಗದೀಪ್ ಧನಕರ್, ಸ್ಪೀಕರ್ ಓಂ ಬಿರ್ಲಾ ಮತ್ತು ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿರುವರು. ಮೋದಿ ಕೂಡ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉಭಯ ಸದನಗಳಲ್ಲಿ ಅವರ ಅಧಿಕಾರಾವಧಿಯ ಕಾರಣದಿಂದಾಗಿ ಸೋರೆನ್ ಅವರು ಅತ್ಯಂತ ಹಿರಿಯ ಸಂಸದರಾಗಿದ್ದಾರೆ. ಅದಕ್ಕಾಗಿಯೇ ಅವರನ್ನು ಸಮಾರಂಭದಲ್ಲಿ ಮಾತನಾಡಲು ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇವರಲ್ಲದೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಪಿಯೂಷ್ ಗೋಯಲ್ ಮತ್ತು ಮೇಲ್ಮನೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಮಾತನಾಡಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 1.15ಕ್ಕೆ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಪುನರಾರಂಭವಾಗಲಿದೆ.