ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ರಾಮನವಮಿ ಮೆರವಣಿಗೆಗಳ ಘರ್ಷಣೆ ಕುರಿತು ಎನ್ಐಎ ತನಿಖೆ ನಡೆಸಬೇಕು ಎಂದು ದೆಹಲಿ ಮೂಲದ ಎನ್ಜಿಒ “ಮಾನವ ಹಕ್ಕುಗಳ ಉಲ್ಲಂಘನೆಯ ಸತ್ಯ ಶೋಧನಾ ಸಮಿತಿ ಆಗ್ರಹಿಸಿದೆ.
ಮಾರ್ಚ್ 30 ರಂದು ರಾಮನವಮಿ ಮೆರವಣಿಗೆಯಲ್ಲಿ ಘರ್ಷಣೆಗಳು ಭುಗಿಲೆದ್ದ ನಂತರ ಸತ್ಯಶೋಧನೆಗಾಗಿ ತೆರಳಿದ್ದ ಸಮಿತಿ ಸದಸ್ಯರನ್ನು ಪೊಲೀಸರು ನಿರ್ಬಂಧಿಸಿದ್ದು, ಈ ಹಿನ್ನಲೆಯಲ್ಲಿ ಸಮಿತಿ ಸದಸ್ಯರು ಈ ಹೇಳಿಕೆ ನೀಡಿದ್ದಾರೆ.
ಗಲಭೆ ಪೀಡಿತ ಹೌರಾ ಮತ್ತು ಹೂಗ್ಲಿ ಜಿಲ್ಲೆಯಯ ರಿಶ್ರಾಗೆ ತಲುಪಲು ಸಂಘಟನೆ ಪ್ರತಿನಿಧಿಗಳಿಗೆ ಅವಕಾಶ ದೊರೆತಿಲ್ಲ. ಆದರೂ ಎನ್ಜಿಒ ಸದಸ್ಯರು ಹರಸಾಹಸ ಪಟ್ಟು ಕೆಲ ಸ್ಥಳಿಯರೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ಉದ್ದೇಶಪೂರ್ವಕ ಭದ್ರತಾ ಲೋಪ ತಿಳಿದುಬಂದಿದೆ. ಅಗತ್ಯ ಸಂಖ್ಯೆಯ ಪೊಲೀಸರನ್ನು ಮೆರವಣಿಗೆಗೆ ನಿಯೋಜಿಸಿದೇ ಇರುವುದು ಉದ್ದೇಶಪೂರ್ವಕ ಘಟನೆ ಎಂದು ಸಂಘಟನೆ ಸದಸ್ಯರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಎನ್ಐಎ ತನಿಖೆ ಅಗತ್ಯ. ಅಲ್ಲದೆ ಕೇಂದ್ರ ಸಶಸ್ತ್ರ ಪಡೆಗಳನ್ನು ಆ ಪ್ರದೇಶದಲ್ಲಿ ನಿಯೋಜಿಸಬೇಕು ಎಂದು ಒತ್ತಾಯಿಸಿದೆ.
ಹೂಗ್ಲಿಯಲ್ಲಿ ಮತ್ತು ಹೌರಾಕ್ಕೆ ಸತ್ಯಶೋಧನಾ ತಂಡದ ಸದಸ್ಯರು ಭೇಟಿ ನೀಡಲು ಪೊಲೀಸರು ನಿರಾಕರಿಸಿದ ಮೇಲೆ ರಾಜಕೀಯ ಗದ್ದಲ ಪ್ರಾರಂಭವಾಗಿದೆ.