ರುದ್ರಾಪುರ (ಉತ್ತರಾಖಂಡ): ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಯಾಗಿ ಎರಡು ವರ್ಷಗಳೇ ಕಳೆದಿವೆ, 2019ರಲ್ಲಿ ಈ ಕಾನೂನು ಜಾರಿಗೆ ಬಂದರೂ ತ್ರಿವಳಿ ತಲಾಖ್ ನೀಡುವವರ ಸಂಖ್ಯೆಯೇನೂ ಕಮ್ಮಿಯಾಗಿಲ್ಲ. ಆದರೆ ಇದರ ಅನ್ವಯ ಮೂರು ವರ್ಷಗಳ ಕಠಿಣ ಶಿಕ್ಷೆ ಎಷ್ಟು ಮಂದಿಗೆ ಸಿಕ್ಕಿದೆ ಎನ್ನುವ ಸರಿಯಾದ ಅಂಕಿ ಅಂಶ ಇಲ್ಲ.
ಈಗ ಅಂಥದ್ದೇ ಒಂದು ಘಟನೆ ಉತ್ತರಾಖಂಡದ ರುದ್ರಾಪುರದಲ್ಲಿ ನಡೆದಿದೆ. ಸಂಜೆ ಮದುವೆಯಾದ ಜಾವೇದ್ ಖಾನ್ ಎಂಬಾತ ವ್ಯಕ್ತಿಯೊಬ್ಬ ಮದುವೆಯಾದ 12 ಗಂಟೆಯಲ್ಲಿಯೇ ಅಂದರೆ ಮರುದಿನ ಬೆಳಗ್ಗೆ ಪತ್ನಿ ನಿಮ್ರಾಳಿಗೆ ತಲಾಖ್ ನೀಡಿದ್ದಾನೆ. ಇದಕ್ಕೆ ಕಾರಣ ವರದಕ್ಷಿಣೆ. ತಾನು ಕೇಳಿದಷ್ಟು ವರದಕ್ಷಿಣೆ ನೀಡಲಿಲ್ಲ ಎನ್ನುವ ಕಾರಣಕ್ಕೆ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ಮಹಿಳೆಗೆ ದೌರ್ಜನ್ಯ ಎಸಗಿದ್ದೂ ಅಲ್ಲದೇ ತ್ರಿವಳಿ ತಲಾಖ್ ಕೂಡ ನೀಡಿದ್ದಾರೆ.
ಈ ಘಟನೆ ಕಳೆದ ವಾರವೇ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಕೀಚ್ ದರವು ನಿವಾಸಿ ನಿಮ್ರಾ ಹಾಗೂ ಬಿಲಾಸ್ಪುರದ ಚಾವೇದ್ ಖಾನ್ ಮದುವೆ ನವೆಂಬರ್ 28ರಂದು ನಡೆದಿದೆ. 29ರ ಬೆಳಗ್ಗೆಯಿಂದಲೇ ಜಾವೇದ್ ಮತ್ತು ಆತನ ಕುಟುಂಬಸ್ಥರು ಹಿಂಸೆ ನೀಡಲು ಶುರುವಾಡಿದ್ದಾರೆ. ನಿಮ್ರಾಳನ್ನು ನೆಲದ ಮೇಲೆ ಕೂರಿಸಿ ವರದಕ್ಷಿಣೆ ವಿಷಯ ಪ್ರಸ್ತಾಪಿಸಿ ಅವಮಾನಿಸಿದ್ದಾರೆ.
ಆದರೆ ಕೊಡುವುದಷ್ಟೂ ಈಗಾಗಲೇ ಕೊಟ್ಟಾಗಿದೆ. ಮತ್ತೆ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ ನಿಮ್ರಾ, ಇದರಿಂದ ಸಿಟ್ಟುಕೊಂಡು ಗಂಡನ ಮನೆಯವರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಷಯವನ್ನು ನಿಮ್ರಾ ತನ್ನ ತಂದೆಗೆ ತಿಳಿಸಿದ್ದಾರೆ. ಗಂಡನ ಮನೆಯವರನ್ನು ಸಮಾಧಾನ ಪಡಿಸಲು ನಿಮ್ರಾಳ ಸಹೋದರರು ಗಂಡನ ಮನೆಗೆ ಹೋಗಿದ್ದಾರೆ. ಈ ವೇಳೆ ಅವರ ಎದುರೇ ಗಂಡ ತ್ರಿವಳಿ ತಲಾಖ್ ನೀಡಿದ್ದಾನೆ.
ನಿಮ್ರಾ ಇದೀಗ ಪತಿ ಸೇರಿದಂತೆ 8 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕಾನೂನಿನ ಅನ್ವಯ ಪತಿ ಹಾಗೂ ಆತನ ಕುಟುಂಬಸ್ಥರಿಗೆ ಯಾವ ರೀತಿಯ ಶಿಕ್ಷೆ ಆಗುತ್ತದೆಯೋ ನೋಡಬೇಕಿದೆ.