ಡೆಹ್ರಾಡೂನ್ : ಉತ್ತರಾಖಂಡದಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದ್ದು ರಾತ್ರಿ 11 ರಿಂದ ಬೆಳಿಗ್ಗೆ 05 ರವರೆಗೆ ರಾತ್ರಿ ಕರ್ಫ್ಯೂ ಆದೇಶ ಹೊರಡಿಸಲಾಗಿದೆ. ರಾತ್ರಿ ಹೊತ್ತು ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಲಾಗಿದೆ. ದೆಹಲಿ ಸೇರಿದಂತೆ ಇತರ ರಾಜ್ಯಗಳಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಹೆಚ್ಚಾಗುತ್ತಿದ್ದು ಇಲ್ಲಿಯವರೆಗೆ ದೇಶಾದ್ಯಂತ ಸುಮಾರು 600 ಹೊಸ ರೂಪಾಂತರಿ ವೈಸರ್ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ದೇಶದ ರಾಜಧಾನಿ ದೆಹಲಿ ಹೊರತು ಪಡಿಸಿ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ ನಂತರ ಇದೀಗ ಉತ್ತರಾಖಂಡದಲ್ಲೂ ರಾತ್ರಿ ಕರ್ಫ್ಯೂ ಹೇರಲಾಗಿದೆ. ಕೊರೊನಾ ಮತ್ತು ಅಮಿಕ್ರಾನ್ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರ ಸೋಮವಾರ ರಾತ್ರಿ ಕರ್ಫ್ಯೂ ವಿಧಿಸಲು ಘೋಷಿಸಿದೆ.
ಉತ್ತರಾಖಂಡ ಸರ್ಕಾರ ಸೋಮವಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ರಾತ್ರಿ ಕರ್ಫ್ಯೂ ಸಮಯದಲ್ಲಿ ಆರೋಗ್ಯ ಸೇವೆಗಳು ಮುಂದುವರಿಯುತ್ತವೆ. ಎಲ್ಲಾ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಆಸ್ಪತ್ರೆ ಬೆಂಬಲ ಸೇವೆಗಳಿಗೆ ಸಂಬಂಧಿಸಿದ ಸಾರಿಗೆಯನ್ನು ರಾತ್ರಿ ಕರ್ಫ್ಯೂ ಸಮಯದಲ್ಲಿ ವಿನಾಯಿತಿ ನೀಡಲಾಗುತ್ತದೆ. ಇದಲ್ಲದೆ ತೈಲ ಮತ್ತು ಅನಿಲ ವಲಯ ಇದರಲ್ಲಿ ಉತ್ಪಾದನೆ, ಸಾಗಣೆ, ವಿತರಣೆ, ಸಂಗ್ರಹಣೆ ಮತ್ತು ಉತ್ಪನ್ನಗಳ ವ್ಯಾಪಾರವನ್ನು ಈ ಕರ್ಫ್ಯೂ ಸಮಯದಲ್ಲಿ ಅವಕಾಶ ನೀಡಲಾಗಿದೆ.
ಕೇರಳದಲ್ಲಿ ಗುರುವಾರದಿಂದ ಭಾನುವಾರದವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಗುರುವಾರದಿಂದ ಭಾನುವಾರದವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ. ಎಲ್ಲಾ ಅಂಗಡಿಗಳು ರಾತ್ರಿ 10 ಗಂಟೆಗೆ ಮುಚ್ಚಬೇಕು ಮತ್ತು ಬೆಳಗ್ಗೆ 5 ಗಂಟೆಯ ನಂತರ ಮಾತ್ರ ತೆರೆಯಬೇಕು. ಇಲ್ಲಿಯವರೆಗೆ, ರಾಜ್ಯದಲ್ಲಿ 57 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 578 ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 142 ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 142 ಪ್ರಕರಣಗಳು ಪತ್ತೆಯಾಗಿವೆ. ನಂತರ ಕೇರಳದಲ್ಲಿ 57, ಗುಜರಾತ್ನಲ್ಲಿ 49 ಮತ್ತು ರಾಜಸ್ಥಾನದಲ್ಲಿ 43 ಪ್ರಕರಣಗಳು ದಾಖಲಾಗಿವೆ.
2022 ರ ಮೊದಲ ತ್ರೈಮಾಸಿಕದಲ್ಲಿ ಐದು ರಾಜ್ಯಗಳು ಅಂದರೆ ಗೋವಾ, ಮಣಿಪುರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕೋವಿಡ್ -19 ಪ್ರಕರಣಗಳ ಉಲ್ಬಣ ಮತ್ತು ಓಮಿಕ್ರಾನ್ ರೂಪಾಂತರದಿಂದ ಬೆದರಿಕೆಯ ನಡುವೆ, ಐದು ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಚುನಾವಣೆಗಳು ಮತ್ತು ರ್ಯಾಲಿಗಳನ್ನು ನಡೆಸುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.
ಸೋಮವಾರ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಪ್ರತಿ ಚುನಾವಣೆಗೆ ಒಳಪಡುವ ರಾಜ್ಯದಲ್ಲಿ ಲಸಿಕೆ ದರಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಿದರು. ಮೊದಲ ಡೋಸ್ ಲಸಿಕೆ ಕವರೇಜ್ ಉತ್ತರಾಖಂಡ ಮತ್ತು ಗೋವಾದಲ್ಲಿ ನೂರಕ್ಕೆ ಹತ್ತಿರವಾಗಿದ್ದರೆ, ಇದು ಉತ್ತರ ಪ್ರದೇಶದಲ್ಲಿ 85 ಪ್ರತಿಶತ ಮತ್ತು ಮಣಿಪುರ ಮತ್ತು ಪಂಜಾಬ್ನಲ್ಲಿ ಸುಮಾರು 80 ಪ್ರತಿಶತದಷ್ಟು ಹತ್ತಿರದಲ್ಲಿದೆ.
ಲಸಿಕೆ ಕವರೇಜ್ ಕಡಿಮೆ ಇರುವ ರಾಜ್ಯಗಳಲ್ಲಿ, ಲಸಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಚುನಾವಣಾ ಆಯೋಗವು ಆರೋಗ್ಯ ಸಚಿವಾಲಯವನ್ನು ಹೇಳಿದೆ. ಇದರಿಂದಾಗಿ ಜನಸಂಖ್ಯೆಯು ಶೀಘ್ರವಾಗಿ ಸಂಪೂರ್ಣವಾಗಿ ಲಸಿಕೆ ಹಾಕಿಕೊಂಡಿರಬೇಕು ಎಂದು ಆರೋಗ ಹೇಳಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಮೇಲಿನ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯಿಲ್ಲ.
ಗುರುವಾರ, ನ್ಯಾಯಮೂರ್ತಿ ಶೇಖರ್ ಯಾದವ್ ಅವರ ಅಲಹಾಬಾದ್ ಹೈಕೋರ್ಟ್ ಪೀಠವು ದೇಶದಲ್ಲಿ ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ವಿಧಾನಸಭೆ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮುಂದೂಡಲು ಮತ್ತು ಎಲ್ಲಾ ರಾಜಕೀಯ ರ್ಯಾಲಿಗಳನ್ನು ನಿಷೇಧಿಸಲು ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರನ್ನು ಕೇಳಿದಾಗ, ಆಯೋಗವು ಶೀಘ್ರದಲ್ಲೇ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಅಗತ್ಯವಿರುವ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.