ವಾರಣಾಸಿ: ಭೋಜ್ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆರೋಪಿಗಳಾದ ಭೋಜ್ಪುರಿ ಗಾಯಕರಾದ ಸಮರ್ ಸಿಂಗ್ ಮತ್ತು ಸಂಜಯ್ ಸಿಂಗ್ ವಿರುದ್ಧ ವಾರಣಾಸಿ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ.
ಮಾರ್ಚ್ 26 ರಂದು ಸಾರನಾಥದ ಹೋಟೆಲ್ ಸುಮೇಂದ್ರ ರೆಸಿಡೆನ್ಸಿಯ ತನ್ನ ಕೋಣೆಯಲ್ಲಿ ಆಕಾಂಕ್ಷಾ ಶವವಾಗಿ ಪತ್ತೆಯಾಗಿದ್ದರು. 12 ದಿನಗಳು ಕಳೆದರೂ ಪೊಲೀಸರು ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಈ ಕುರಿತು ವಿವರ ನೀಡಿದ ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್, ಸಾರನಾಥ್, ಜ್ಞಾನ್ ಪ್ರಕಾಶ್ ರೈ, “ನಾವು ಆರೋಪಿಗಳಿಬ್ಬರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದೇವೆ. ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದ್ದಾರೆ.
ಮೃತ ನಟಿಯ ತಾಯಿ ಮಧು ದುಬೆ ಅವರು ಮಾರ್ಚ್ 27 ರಂದು ಆತ್ಮಹತ್ಯೆಗೆ ಪ್ರಚೋದನೆ ಕಾಯ್ದೆ ಅಡಿಯಲ್ಲಿ ಭೋಜ್ಪುರಿ ಗಾಯಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. “ಸಮರ್, ಆಂಕಾಕ್ಷಾಗೆ 3 ಕೋಟಿ ರೂಪಾಯಿ ನೀಡಲು ಬಾಕಿ ಉಳಿಸಿಕೊಂಡಿದ್ದು, ಅದನ್ನು ಕೇಳಿದಾಗ, ಸಮರ್ ಅವಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ಮಧು ವಿವರಿಸಿದ್ದಾರೆ.