ರಾಂಪುರ: ಉತ್ತರ ಪ್ರದೇಶದ ರಾಂಪುರದ ಎಂಪಿ/ಎಂಎಲ್ಎ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ 2019ರಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಇಬ್ಬರು ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಅಜಂ ಖಾನ್ ವಿರುದ್ಧ ಎರಡು ಹೊಸ ಎಫ್ ಐ ಆರ್ ದಾಖಲಿಸಲಾಗಿದೆ.
ಐದು ಜನರು ಮಂಗಳವಾರ ತಮ್ಮ ಮನೆಗೆ ನುಗ್ಗಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಅಜಂ ಅವರ ಸಂಬಂಧಿಕರಾದ ಅಬ್ದುಲ್ ಪರ್ವೇಜ್ ಶಮ್ಸಿ, ಇಶಾನ್ ಮಹಮೂದ್, ಮೊಯಿನ್ ಪಠಾಣ್ ಮತ್ತು ಇತರ ಕೆಲವರು ಮಂಗಳವಾರ ರಾತ್ರಿ ಅವರ ಮನೆಗೆ ನುಗ್ಗಿ ಅವರ ಹೇಳಿಕೆಯನ್ನು ದಾಖಲಿಸದಂತೆ ಬೆದರಿಕೆ ಹಾಕಿದರು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಎಫ್ಐಆರ್ ದಾಖಲಾದ ನಂತರ, ಮೊದಲ ಫಿರ್ಯಾದಿಯನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು ಮತ್ತು ಅವರ ‘ಭಾಗಶಃ ಹೇಳಿಕೆ’ ದಾಖಲಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಸಂಸಾರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, “ನಾವು ಅಜಂ ಖಾನ್ ಮತ್ತು ಇತರರ ವಿರುದ್ಧ ಐಪಿಸಿಯ ಸೆಕ್ಷನ್ 147 (ಗಲಭೆ), 195 ಎ (ಸುಳ್ಳು ಸಾಕ್ಷ್ಯಗಳನ್ನು ನೀಡಲು ಯಾವುದೇ ವ್ಯಕ್ತಿಗೆ ಬೆದರಿಕೆ), 506 (ಕ್ರಿಮಿನಲ್ ಬೆದರಿಕೆ), 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎರಡು ಎಫ್ಐಆರ್ ದಾಖಲಿಸಿದ್ದೇವೆ” ಎಂದು ಹೇಳಿದರು.