ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಲಿದೆ. ಈ ಹಿನ್ನಲೆ ಕಾಶಿಯ ಇಬ್ಬರು ಮುಸ್ಲಿಂ ಮಹಿಳೆಯರು ಅಯೋಧ್ಯೆಯಿಂದ ಕಾಶಿಗೆ ರಾಮಜ್ಯೋತಿಯನ್ನು ಕೊಂಡೊಯ್ಯಲು ಮುಂದಾಗಿದ್ದಾರೆ.
ಹೌದು, ವಾರಾಣಸಿಯ ನಜ್ನೀನ್ ಅನ್ಸಾರಿ ಹಾಗೂ ನಜ್ಮಾ ಪರ್ವೀನ್ ಎಂಬ ಮುಸ್ಲಿಂ ಮಹಿಳೆಯರು ಇಂತಹ ಸೌಹಾರ್ದ ಸಂದೇಶ ರವಾನೆಯ ತೀರ್ಮಾನ ಮಾಡಿದ್ದಾರೆ.
ಇವರು ಶನಿವಾರ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದು, ಅಯೋಧ್ಯೆಯಿಂದ ರಾಮಜ್ಯೋತಿ, ಅಯೋಧ್ಯೆಯ ಮಣ್ಣು ಹಾಗೂ ಸರಯೂ ನದಿಯ ನೀರನ್ನು ಕಾಶಿಗೆ ಕೊಂಡೊಯ್ಯಲಿದ್ದಾರೆ. ಇವರು ಭಾನುವಾರ ಕಾಶಿಯನ್ನು ತಲುಪಲಿದ್ದು, ಜನವರಿ 21ರಿಂದ ರಾಮಜ್ಯೋತಿಯನ್ನು ಹಸ್ತಾಂತರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ನಜ್ನೀನ್ ಅನ್ಸಾರಿ ಹಾಗೂ ನಜ್ಮಾ ಪರ್ವೀನ್ ಅವರು ಶ್ರೀರಾಮನ ಭಕ್ತರಾಗಿದ್ದಾರೆ. ನಜ್ನೀನ್ ಅನ್ಸಾರಿ ಅವರು ಬನಾರಸ್ ಹಿಂದು ವಿವಿಯಲ್ಲಿ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದ್ದಾರೆ. ಇವರು ಹನುಮಾನ್ ಚಾಲೀಸಾ ಹಾಗೂ ರಾಮಚರಿತಮಾನಸವನ್ನು ಉರ್ದು ಭಾಷೆಗೆ ಭಾಷಾಂತರ ಮಾಡಿದ್ದಾರೆ.
ನಜ್ಮಾ ಪರ್ವಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಧ್ಯಯನ ಮಾಡಿ ಮಂಡಿಸಿದ ಪ್ರಬಂಧಕ್ಕೆ ಪಿ.ಎಚ್ಡಿ ಪಡೆದಿದ್ದಾರೆ. ಇಬ್ಬರೂ ರಾಮನ ಭಕ್ತರಾಗಿದ್ದು, ಹಿಂದು-ಮುಸ್ಲಿಮರ ಮಧ್ಯೆ ಸೌಹಾರ್ದ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ನಜ್ಮಾ ಪರ್ವಿನ್ ಅವರು ತ್ರಿವಳಿ ತಲಾಕ್ ವಿರುದ್ಧದ ಹೋರಾಟದಲ್ಲೂ ಪಾಲ್ಗೊಂಡಿದ್ದರು.