ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ಅವರು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯಲ್ಲಿ ಮಹಿಳೆಯರ ಮೀಸಲಾತಿಯಲ್ಲಿ ಶೇ. 27ರಷ್ಟು ಪ್ರಮಾಣವನ್ನು ಒಬಿಸಿ ವರ್ಗದ ಮಹಿಳೆಯರಿಗೆ ವಿಶೇಷ ಕೋಟಾ ನೀಡಲಾಗಿಲ್ಲ ಎಂದು ಉಮಾ ಭಾರತಿ ಆಕ್ಷೇಪಿಸಿದ್ದಾರೆ.
ರಾಮಜನ್ಮಭೂಮಿ ಹೋರಾಟಗಳ ಮೂಲಕ ಪ್ರಖರ ವಾಗ್ಮಿ ಎಂದು ದೇಶವ್ಯಾಪಿ ಹೆಸರು ಮಾಡಿದ್ದ ಉಮಾಭಾರತಿ ಈ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿರುವ ಕೆಲವೇ ಮಂದಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
“ದೇವೇಗೌಡ ಜೀ ಅವರು 1996ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದಾಗ ನಾನು ಒಬಿಸಿ ಕೋಟಾ ಸೇರಿಸುವಂತೆ ಪ್ರಸ್ತಾಪಿಸಿದ್ದೆ. ಆವತ್ತು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಬಿಸಿ ಕೋಟಾ ಇಲ್ಲದ ಈ ಮಸೂದೆಗೆ ಒಮ್ಮತದಿಂದ ಅನುಮೋದನೆ ನೀಡಿ ಬೆಂಬಲಿಸಿದ್ದವು’ ಎಂದು ಪತ್ರಿಕಾಗೋಷ್ಠಿಯಲ್ಲಿ ಉಮಾಭಾರತಿ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಒಬಿಸಿ ವರ್ಗಗಳ ಪ್ರಮಾಣ ಶೇ. 50ಕ್ಕಿಂತಲೂ ತುಸು ಹೆಚ್ಚಿದೆ. ಹೀಗಾಗಿ, ಹಿಂದುಳಿದ ವರ್ಗಗಳ ಮತಗಳು ಇಲ್ಲಿ ನಿರ್ಣಾಯಕ ಎನಿಸಿವೆ. ಉಮಾಭಾರತಿ ಪ್ರಖರ ಹಿಂದುತ್ವವಾದಿಯಾದರೂ ಒಬಿಸಿ ವರ್ಗದ ಸಮುದಾಯಕ್ಕೆ ಸೇರಿದವರಾಗಿದ್ದಾರೆ.