ಲಖ್ನೋ: 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ಗಾಜಿಯಾಬಾದ್ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ(ಎಸ್ಟಿಎಫ್), ಪ್ರಾಂಶುಪಾಲ ಸೇರಿದಂತೆ ಆರು ಮಂದಿಯನ್ನು ಬಂಧಿಸಿದೆ.
ಸೈದ್ಪುರದ ಪ್ರಾಂಶುಪಾಲರು, ಶಿಕ್ಷಕರು ಮತ್ತು ಇತರ ಸಿಬ್ಬಂದಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಂದ ಉತ್ತೀರ್ಣರಾಗಲು 25,000 ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಮಾಹಿತಿ ಆಧಾರದ ಮೇರೆಗೆ ಎಸ್ಟಿಎಫ್ ಅಧಿಕಾರಿಗಳು ಇಂಟರ್ ಕಾಲೇಜು ಪಕ್ಕದಲ್ಲಿರುವ ಪಂಚಾಯತ್ ಭವನದ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಲಂಚ ನೀಡಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಮತ್ತು ಇತರ ನಿರ್ವಾಹಕರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳು ಭೌತಶಾಸ್ತ್ರದ ಪತ್ರಿಕೆಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳನ್ನು ನೀಡುತ್ತಿದ್ದಾರೆ ಎಂದು ವಾರಣಾಸಿ ಎಸ್ಟಿಎಫ್ ಮುಖ್ಯಸ್ಥ ಪುನಿತ್ ಸಿಂಗ್ ಪರಿಹಾರ್ ಅವರಿಗೆ ರ್ನಿಧಿಷ್ಟ ಮಾಹಿತಿ ಬಂದಿತ್ತು.
ಬಳಿಕ ದಾಳಿ ನಡೆಸಿ ರವಿ, ಶೈಲೇಂದ್ರ ಮತ್ತು ರಜನೀಶ್ ಕುಶ್ವಾಹ ಎಂಬ ವಿದ್ಯಾರ್ಥಿಗಳನ್ನು ಬಂಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ವಿದ್ಯಾರ್ಥಿಗಳು ನೀಡಿದ ಮಾಹಿತಿ ಮೇರೆಗೆ ನಿರ್ವಾಹಕರಾದ ರವೀಂದ್ರನಾಥ್ ರೈ, ಗುಮಾಸ್ತ ಅಶೋಕ್ ಕುಮಾರ್ ಮತ್ತು ಪಿಯೂಷ್ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರುಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಯುಪಿ ಬೋರ್ಡ್ನ 12 ನೇ ತರಗತಿಯ ಪತ್ರಿಕೆಯು ಬಲ್ಲಿಯಾದಲ್ಲಿ ಸೋರಿಕೆಯಾದ ಬೆನ್ನಲ್ಲೇ ಈ ಘಟನೆಯು ನಡೆದಿದೆ. ಎರಡು ಶಾಲೆಗಳ ಮ್ಯಾನೇಜರ್, ಒಬ್ಬ ಶಿಕ್ಷಕ ಮತ್ತು ಮೂವರು ಸಿಬ್ಬಂದಿ ಪರೀಕ್ಷೆ ಪತ್ರಿಕೆಯನ್ನು ಒಳಗೊಂಡ ಟ್ಯಾಂಪರ್ ಪ್ರೂಫ್ ಪ್ಯಾಕೆಟ್ ಅನ್ನು ತೆರೆದು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಿಂದ ಮಾರ್ಚ್ 30 ರಂದು ರಾಜ್ಯ ಮಂಡಳಿಯ 12 ನೇ ತರಗತಿಯ ಇಂಗ್ಲಿಷ್ ಪರೀಕ್ಷೆಯು ಸೋರಿಕೆಯಾಯಿತು, ನಂತರ 24 ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಪರೀಕ್ಷೆಯು ಈಗ ಏಪ್ರಿಲ್ 13 ರಂದು ನಡೆಯಲಿದೆ.