ಲಖ್ನೋ: ಮೇಲಧಿಕಾರಿಯ ನಡೆಗೆ ಮನನೊಂದ ವಿದ್ಯುತ್ ಇಲಾಖೆಯ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
45 ವರ್ಷದ ಲೈನ್ ಮ್ಯಾನ್ ಗೋಕುಲ್ ಪ್ರಸಾದ್, ಲಖೀಂಪುರದ ಜೂನಿಯರ್ ಇಂಜಿನಿಯರ್ ಕಚೇರಿಯ ಹೊರಗೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಜೂನಿಯರ್ ಇಂಜಿನಿಯರ್ ನಾಗೇಂದ್ರ ಕುಮಾರ್ ಹಾಗೂ ಗುಮಾಸ್ತರನ್ನು ಅಮಾನತು ಮಾಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗೋಕುಲ್ ಪ್ರಸಾದ್ ಅವರು ಬೆಂಕಿ ಹಚ್ಚಿಕೊಂಡ ನಂತರ ಚಿತ್ರೀಕರಿಸಿದ ವೀಡಿಯೊದಲ್ಲಿ, ಘಟನೆಯನ್ನು ವಿವರಿಸಿದ್ದಾರೆ. ಜೂನಿಯರ್ ಇಂಜಿನಿಯರ್ ಮತ್ತು ಅವರ ಸಹಾಯಕರು ತನಗೆ ಕಿರುಕುಳ ನೀಡುತ್ತಿದ್ದರು ಮತ್ತು ಪೊಲೀಸರನ್ನು ಸಂಪರ್ಕಿಸಿದರೂ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ.ಇನ್ನೊಂದು ವಿಡಿಯೋದಲ್ಲಿ ಆರೋಪಿಗಳು ಕಳೆದ ಮೂರು ವರ್ಷಗಳಿಂದ ಗೋಕುಲ್ಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.
‘ಅವರು ಖಿನ್ನತೆಗೆ ಒಳಗಾದರು, ಔಷಧಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು, ಆದರೆ ಅವರು ನಮ್ಮವರನ್ನು ಬಿಡಲಿಲ್ಲ. ಅವರನ್ನು ಅಲಿಗಂಜ್ಗೆ ವರ್ಗಾಯಿಸಲಾಯಿತು. ಇದರಿಂದ ಅವರಿಗೆ ಪ್ರಯಾಣಿಸಲು ಕಷ್ಟವಾಗುತ್ತಿತ್ತು.
ಆದ್ದರಿಂದ ಅವರು ವರ್ಗಾವಣೆ ಕೇಳಿದರು. ಆಗ ನಿನ್ನ ಹೆಂಡತಿಯನ್ನ ಒಂದು ರಾತ್ರಿ ನಮ್ಮೊಂದಿಗೆ ಮಲಗಲು ಕರೆದುಕೊಂಡು ಬಾ, ಆಗ ನಿನ್ನನ್ನು ವರ್ಗಾವಣೆ ಮಾಡುತ್ತೇವೆ,’ ಎಂದು ಅವರು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಸುಮನ್ ಮಾತನಾಡಿ, ‘ಜೂನಿಯರ್ ಇಂಜಿನಿಯರ್ ವರ್ಗಾವಣೆಗೆ ಕೋರಿದಾಗ ಲೈನ್ಮ್ಯಾನ್ ಬಳಿ ಹಣದ ಬೇಡಿಕೆಯಿಟ್ಟು ಅಸಭ್ಯವಾಗಿ ಮಾತನಾಡಿದ್ದಾರೆಂದು ಆರೋಪಿಸಿದ್ದಾರೆ, ನಾವು ಪ್ರಕರಣ ದಾಖಲಿಸಿದ್ದೇವೆ, ಇಲಾಖಾ ಮಟ್ಟದಲ್ಲಿ ಜೂನಿಯರ್ ಎಂಜಿನಿಯರ್ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗಿದೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು