ಲಕ್ನೊ : ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಗುರುವಾರ(ಫೆ.10) ಆರಂಭವಾಗಿದೆ. ಪಶ್ಚಿಮ ಉತ್ತರ ಪ್ರದೇಶ ಭಾಗದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಾಯಂಕಾಲ 6 ಗಂಟೆಯವರೆಗೆ ಮುಂದುವರಿಯಲಿದೆ. ಮೊದಲ ಹಂತದಲ್ಲಿ 73 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1.24 ಕೋಟಿ ಪುರುಷರು, 1.04 ಕೋಟಿ ಮಹಿಳೆಯರು ಸೇರಿದಂತೆ 2.28 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಇಂದು ಘಟಾನುಘಟಿಗಳ ಭವಿಷ್ಯ ನಿರ್ಧಾರ: ಇಂದಿನ ಮತದಾನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮಹತ್ವವಾಗಿದೆ. ಮಥುರಾದಿಂದ ಶ್ರೀಕಾಂತ್ ಶರ್ಮ, ಗಜಿಯಾಬಾದ್ ನಿಂದ ಅತುಲ್ ಗಾರ್ಗ್, ಥಾನ ಭವನ್ ಕ್ಷೇತ್ರದಿಂದ ಸುರೇಶ್ ರಾಣಾ, ಮುಜಾಫರ್ ನಗರದಿಂದ ಕಪಿಲ್ ದೇವ್ ಅಗರ್ವಾಲ್ ಮತ್ತು ಅತ್ರೌಲಿ ಕ್ಷೇತ್ರದಿಂದ ಸಂದೀಪ್ ಸಿಂಗ್ ಅವರ ಭವಿಷ್ಯ ನಿರ್ಧಾರವಾಗಲಿದೆ.
ಇನ್ನುಳಿದ ಸಚಿವರಾದ ಛತ ಕ್ಷೇತ್ರದಿಂದ ಲಕ್ಷ್ಮೀನಾರಾಯಣ ಚೌಧರಿ, ಶಿಕಾರ್ಪುರ್ ಕ್ಷೇತ್ರದಿಂದ ಅನಿಲ್ ಖರ್ಮ, ಆಗ್ರಾ ಕಂಟೋನ್ಮೆಂಟ್ ನಿಂದ ಜಿ ಎಸ್ ಧರ್ಮೇಶ್ ಮತ್ತು ಹಸ್ತಿನಾಪುರ ಕ್ಷೇತ್ರದಿಂದ ದಿನೇಶ್ ಖಾತಿಕ್ ಕೂಡ ಸ್ಪರ್ಧಿಸುತ್ತಿದ್ದು ಅವರ ಭವಿಷ್ಯ ಇಂದೇ ನಿರ್ಧಾರವಾಗಲಿದೆ.
ಮೊದಲ ಹಂತದ ಮತದಾನದ ‘ಮಾದರಿ’ಯು ಮತದಾರರ ಬಾಯಿಮಾತಿನ ಮೂಲಕ ಗ್ರಹಿಸಲ್ಪಡುತ್ತದೆ. ಆ ದಿನವೇ ಎಲ್ಲಾ ಪಕ್ಷಗಳು ತಮ್ಮ ಪರವಾದ ತಯಾರಿ ನಡೆಸುತ್ತಿರುತ್ತವೆ. ಈ ಗ್ರಹಿಕೆಯು ಎರಡನೇ ಮತ್ತು ಮೂರನೇ ಹಂತದಲ್ಲಿ ಮತದಾನದ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ. ಬಿಜೆಪಿಯ ಉನ್ನತ ನಾಯಕರ ತೀವ್ರ ಪ್ರಚಾರ, ಅಖಿಲೇಶ್ ಮತ್ತು ಜಯಂತ್ ಚೌಧರಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದು, ಮಾಯಾವತಿ ಅವರ ಹೇಳಿಕೆಗಳು ಇಂದಿನ ಮತದಾನದ ಮೇಲೆ ಪ್ರಭಾವ ಬೀರಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ರತನ್ ಮನಿ ಲಾಲ್.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಹಂತದಲ್ಲಿ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಸೀಟುಗಳನ್ನು ಗೆದ್ದಿತ್ತು. ಐದು ವರ್ಷಗಳ ಹಿಂದೆ, 58 ಸ್ಥಾನಗಳಲ್ಲಿ ಬಿಜೆಪಿ 53 ಸ್ಥಾನಗಳನ್ನು ಗೆದ್ದಿದ್ದರೆ, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ತಲಾ ಎರಡು ಸ್ಥಾನಗಳನ್ನು ಮತ್ತು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಒಂದು ಸ್ಥಾನವನ್ನು ಗೆದ್ದಿತ್ತು. ಆಡಳಿತಾರೂಢ ಬಿಜೆಪಿಯು ಎಸ್ಪಿ ಮತ್ತು ಆರ್ಎಲ್ಡಿ ಮೈತ್ರಿಕೂಟದೊಂದಿಗೆ ಈ ಬಾರಿ ನೇರ ಸ್ಪರ್ಧೆಯಲ್ಲಿದ್ದರೆ, ಬಿಎಸ್ಪಿ ಕೆಲವು ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ಹೊಂದಿದೆ.