ಶಾಜಹಾನ್ಪುರ : ಬಿಜೆಪಿ ಸರ್ಕಾರ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದೆ ಆದರೆ ಮಾಫಿಯಾ ವಿರುದ್ಧ ಬುಲ್ಡೋಜರ್ಗಳನ್ನು ಇರಿಸಿಕೊಂಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದ್ದಾರೆ.
‘ಬಿಜೆಪಿ ಸರ್ಕಾರ ಒಂದು ಕೈಯಲ್ಲಿ ಅಭಿವೃದ್ಧಿಯನ್ನು ಮತ್ತೊಂದು ಕೈನಲ್ಲಿ ಬುಲ್ಡೋಜರ್ಅನ್ನು ಇರಿಸಿಕೊಂಡಿದೆ. ಮಾಫಿಯಾ ಮೇಲೆ ಹತ್ತಿಸಲು ಬುಲ್ಡೋಜರ್ ಬಳಸುತ್ತದೆ. ಅದರಿಂದಲೇ ರಾಜ್ಯದ ಮಹಿಳೆಯರು ಸುರಕ್ಷಿತ ಭಾವ ಹೊಂದಿದ್ದಾರೆ. ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ’ ಎಂದರು.
ಶಾಜಹಾನ್ಪುರದ ಕಾಂತ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಸಮಾಜವಾದಿ ಪಕ್ಷದ (ಎಸ್ಪಿ) ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಎಸ್ಪಿ ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ಹೆಸರಿನಲ್ಲಿ ಸ್ಮಶಾನಗಳಿಗೆ ಗೋಡೆ ಕಟ್ಟುವ ಕೆಲಸವನ್ನು ಮಾತ್ರ ಮಾಡಿತ್ತು ಎಂದರು.
ಎಸ್ಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಸಂಪರ್ಕವನ್ನು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸ್ವಕ್ಷೇತ್ರ ಸೈಫೈ ಮತ್ತು ಆಜಂ ಖಾನ್ ಅವರ ಕ್ಷೇತ್ರಕ್ಕೆ ಮಾತ್ರ ಒದಗಿಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗ್ರಾಮಸ್ಥರು ದಿನದ 24 ಗಂಟೆಗಳೂ ವಿದ್ಯುತ್ ಪಡೆಯುತ್ತಿದ್ದಾರೆ. ಭಯೋತ್ವಾದಕರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಎಸ್ಪಿ ಸರ್ಕಾರ ಹಿಂಪಡೆಯಿತು. ಆದರೆ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಿತು ಎಂದರು.
ಈ ಮೊದಲು ಧಾರ್ಮಿಕ ಆಚರಣೆ ಹೆಸರಿನಲ್ಲಿ ಕೇವಲ ಸೈಫೈ ಮಹೋತ್ಸವವನ್ನು ಆಯೋಜಿಸಲಾಗುತ್ತಿತ್ತು. ಆದರೆ ಈಗ ಅಯೋಧ್ಯೆಯಲ್ಲಿ ದೀಪೋತ್ಸವ, ಮಥುರಾದಲ್ಲಿ ರಂಗೋತ್ಸವ ಮತ್ತು ಕಾಶಿಯಲ್ಲಿ ದೇವ್ ದೀಪಾವಳಿ ಆಯೋಜಿಸಲಾಗುತ್ತಿದೆ ಎಂದರು.