ಲಕ್ನೋ : ಕಾಶ್ಮೀರ ಪಂಡಿತರ ಕುರಿತಾದ `ದಿ ಕಾಶ್ಮೀರ್ ಫೈಲ್ಸ್’ ಚಿತ್ರ ತಯಾರಿಸಬಹುದಾದರೆ `ಲಖೀಂಪುರ್ ಫೈಲ್ಸ್’ ಚಿತ್ರ ಕೂಡ ನಿರ್ಮಿಸಬಹುದಾಗಿದೆ ಎಂದು ಹೇಳಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬಿಜೆಪಿಯನ್ನು ವ್ಯಂಗ್ಯವಾಡಿದ್ದಾರೆ.
“ಕಾಶ್ಮೀರ್ ಫೈಲ್ಸ್ ಎಂಬ ಚಿತ್ರ ತಯಾರಿಸಲಾಗಿದೆಯಾದರೆ, ವಾಹನವೊಂದನ್ನು ರೈತರ ಮೇಲೆ ಹರಿಸಲಾದ ಲಖೀಂಪುರ್ ಘಟನೆ ಕುರಿತಂತೆ ಕನಿಷ್ಠ `ಲಖೀಂಪುರ್ ಫೈಲ್ಸ್’ ಎಂಬ ಚಿತ್ರವೂ ತಯಾರಾಗಬೇಕು” ಎಂದು ಸೀತಾಪುರ್ ಜಿಲ್ಲೆಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಹೇಳಿದ್ದಾರೆ.
ಅಕ್ಟೋಬರ್ 3, 2021ರಂದು ನಡೆದ ಘಟನೆಯಲ್ಲಿ ಕೇಂದ್ರ ಸಚಿವ ಅಜಯ್ ಮೌರ್ಯ ಅವರ ಪುತ್ರನಿಗೆ ಸೇರಿದ ವಾಹನವೊಂದು ರೈತರ ಮೇಲೆ ಹರಿದು ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಧಾನಸಭಾ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು “ಸಮಾಜವಾದಿಗಳು ನೈತಿಕ ಗೆಲುವನ್ನು ಸಾಧಿಸಿದ್ದಾರೆ. ನಮ್ಮ ಪಕ್ಷ ಮೇಲೇರುತ್ತಿದೆ ಬಿಜೆಪಿ ಕೆಳಗಿಳಿಯುತ್ತಿದೆ” ಎಂದು ಹೇಳಿದರು.