ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಎಸ್ಪಿ ಒಟ್ಟಾಗಿ ಸ್ಪರ್ಧಿಸುವ ವಿಚಾರವಾಗಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಸಿಎಂ ಸ್ಥಾನದ ಆಫರ್ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಯುಪಿ ಚುನಾವಣೆಯಲ್ಲಿ ತಮ್ಮ ಜಂಟಿ ಪಕ್ಷಗಳ ಪರವಾಗಿ ಸಿಎಂ ಅಭ್ಯರ್ಥಿಯಾಗಿ ನಿಲ್ಲುವಂತೆ ಮುಖ್ಯಮಂತ್ರಿ ಮಾಯಾವತಿ ಅವರಿಗೆ ಪ್ರಸ್ತಾವನೆಗಳನ್ನು ಕಳುಹಿಸಿದ್ದೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಹುಲ್ ಗಾಂಧಿ ಶನಿವಾರದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ರಾಹುಲ್ ಹೇಳಿಕೆಗೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಉಮೇದುವಾರಿಕೆ ಕುರಿತು ರಾಹುಲ್ ಹೇಳಿರುವ ವಿಚಾರವನ್ನು ಖಂಡಿಸುವುದಾಗಿ ಮಾಯಾವತಿ ಹೇಳಿದ್ದಾರೆ. ”ರಾಹುಲ್ ಗಾಂಧಿ ಜಾತಿವಾದಿ ಮನಸ್ಥಿತಿಯಿಂದ ಬಳಲುತ್ತಿದ್ದು, ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದಾರೆ, ನನಗೆ ಯಾವುದೇ ಆಫರ್ ಬಂದಿಲ್ಲ ಮತ್ತು ಕಾಂಗ್ರೆಸ್ ಎಂದಿಗೂ ದಲಿತರ ಪರವಾಗಿ ನಿಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಐ, ಇಡಿ ಮತ್ತು ಪೆಗಾಸಸ್ಗೆ ಹೆದರುತ್ತಿದ್ದಾರೆ ಎಂಬ ರಾಹುಲ್ ಟೀಕೆಗೆ ಪ್ರತಿಕ್ರಿಯಿಸಿದ ಮಾಯಾವತಿ, ಮಾಜಿ ಪ್ರಧಾನಿ ಮತ್ತು ದಿವಂಗತ ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಕೂಡ ಬಿಎಸ್ಪಿ ಇಮೇಜ್ಗೆ ಕಳಂಕ ತರಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು. “ಈಗ, ಪ್ರಿಯಾಂಕಾ ಗಾಂಧಿ ಅದೇ ಮಾತನ್ನು ಹೇಳುತ್ತಿದ್ದಾರೆ, ಇದೆಲ್ಲಾ ಸುಳ್ಳು ಎಂದರು. ಕಾಂಗ್ರೆಸ್ ಯಾವಾಗಲೂ ಬಿಎಸ್ಪಿಯನ್ನು ಅವಮಾನಿಸಲು ಮತ್ತು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕಿಡಿ ಕಾರಿದರು.