ತೀವ್ರವಾಗಿ ಅಸ್ವಸ್ಥಗೊಂಡಿರುವ ಹಸುಗಳಿಗೆ ಆಂಬ್ಯುಲೆನ್ಸ್ ಸೇವೆ ಆರಂಭಿಸುವ ಮಹತ್ವದ ಯೋಜನೆಗೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಈ ಬಗ್ಗೆ ರಾಜ್ಯ ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಮಾಹಿತಿ ನೀಡಿದ್ದು, “112 ತುರ್ತು ಸೇವಾ ಸಂಖ್ಯೆ ಈ ಹೊಸ ಆಂಬ್ಯುಲೆನ್ಸ್ ಸೇವೆಯು ಅಸ್ವಸ್ಥಗೊಂಡ ಹಸುಗಳಿಗೆ ತ್ವರಿತ ಚಿಕಿತ್ಸೆಗೆ ದಾರಿಯಾಗಲಿದೆ” ಎಂದು ಹೇಳಿದ್ದಾರೆ.
ಈಗಾಗಲೇ ಈ ಹೊಸ ಯೋಜನೆಗೆ 515 ಆಂಬ್ಯುಲೆನ್ಸ್ಗಳು ಸಿದ್ಧವಾಗಿದ್ದು, ಬಹುಶಃ ಇಂತಹದೊಂದು ಮಹತ್ವದ ಯೋಜನೆ ದೇಶದಲ್ಲೇ ಮೊದಲನೆಯದು ಎಂದು ಸಚಿವರು ಹೇಳಿದ್ದಾರೆ.
ಸೇವೆಯನ್ನು ಕೋರಿ ʼ112ʼಕ್ಕೆ ಕರೆ ಮಾಡಿದ 15 ರಿಂದ 20 ನಿಮಿಷಗಳಲ್ಲಿ ಪಶುವೈದ್ಯರು ಮತ್ತು ಇಬ್ಬರು ಸಹಾಯಕರೊಂದಿಗೆ ಆಂಬ್ಯುಲೆನ್ಸ್ ಮನೆ ಬಾಗಿಲಿಗೆ ಬರಲಿದೆ. ಈ ಯೋಜನೆಯು ಡಿಸೆಂಬರ್ ನಲ್ಲಿ ಆರಂಭವಾಗಲಿದೆ. ಹಾಗೆಯೇ ದೂರುಗಳನ್ನು ಸ್ವೀಕರಿಸಲು ಲಕ್ನೋದಲ್ಲಿ ಕಾಲ್ ಸೆಂಟರ್ ಕೂಡ ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ʼರಾಜ್ಯದಲ್ಲಿ ಉಚಿತವಾಗಿ ಉತ್ತಮ ಗುಣಮಟ್ಟದ ವೀರ್ಯ ಮತ್ತು ಭ್ರೂಣ ಕಸಿ ತಂತ್ರಜ್ಞಾನವನ್ನು ಒದಗಿಸುವುದರೊಂದಿಗೆ ಉನ್ನತ ಮಟ್ಟದ ತಳಿ ಸುಧಾರಣೆ ಕಾರ್ಯಕ್ರಮಕ್ಕೆ ಉತ್ತೇಜನ ಸಿಗಲಿದ್ದು, ಬರಡಾದ ಹಸುಗಳನ್ನೂ ಹೆಚ್ಚು ಹಾಲು ನೀಡುವ ಹಸುವಾಗಿ ಪರಿವರ್ತಿಸುವ ತಂತ್ರಜ್ಞಾನವು ರಾಜ್ಯದಲ್ಲಿ ಕಾಲಿಡಲಿದೆ. ಈಗಾಗಲೇ ಮಥುರಾ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಈ ಯೋಜನೆ ಆರಂಭವಾಗಲಿದೆ ಎಂದು ಸಚಿವ ಚೌಧರಿ ಹೇಳಿದ್ದಾರೆ.