ಲಕ್ನೋ, ಜ. 18 : ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ 150 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಿಂದುಳಿದ ವರ್ಗಗಳ ಗರಿಷ್ಠ 55 ಅಭ್ಯರ್ಥಿಗಳಿಗೆ ಎಎಪಿ ಅನುಮೋದನೆ ನೀಡಿದೆ.
ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಿದರು. ಎಎಪಿ ಈ ಬಾರಿ ಉತ್ತರಪ್ರದೇಶದ ಎಲ್ಲಾ 403 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ ಅಭ್ಯರ್ಥಿಗಳ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. ಪಕ್ಷವು ಹಿಂದುಳಿದ ವರ್ಗಗಳ 55 ಅಭ್ಯರ್ಥಿಗಳು, 36 ಬ್ರಾಹ್ಮಣರು, 31 ಪರಿಶಿಷ್ಟ ಜಾತಿಗಳು ಮತ್ತು 14 ಮುಸ್ಲಿಮರು ಸೇರಿದಂತೆ ಇತರರಿಗೆ ಟಿಕೆಟ್ ನೀಡಿದೆ ಎಂದು ಸಂಜಯ್ ಸಿಂಗ್ ಅವರು ಹೇಳಿದರು. ಚುನಾವಣೆಯಲ್ಲಿ ಎಎಪಿ ಉತ್ತಮ ಮತ್ತು ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಸಿಂಗ್ ಹೇಳಿದರು.
ಮೊದಲ ಪಟ್ಟಿಯಲ್ಲಿ ಎಂಬಿಎ ಮುಗಿಸಿದ ಎಂಟು ಅಭ್ಯರ್ಥಿಗಳಿದ್ದು, ಇದಲ್ಲದೇ 38 ಸ್ನಾತಕೋತ್ತರ ಪದವೀಧರರು, ನಾಲ್ವರು ವೈದ್ಯರು, ಪಿಎಚ್ಡಿ ಮಾಡಿದ ಎಂಟು ಮಂದಿ, ಇಂಜಿನಿಯರ್ಗಳು, 39 ಮಂದಿ ಪದವೀಧರರಿದ್ದು, ಮೊದಲ ಪಟ್ಟಿಯಲ್ಲಿ ಎಂಟು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಈಗ ಈ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಿ ರಾಜಕೀಯದಲ್ಲಿನ ಕೊಳಕನ್ನು ಒರೆಸುವ ಜವಾಬ್ದಾರಿ ಯುಪಿಯ ಜನರ ಮೇಲಿದೆ ಎಂದರು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಏಳು ಹಂತಗಳಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆ ಮುನ್ನಲೆಯಲ್ಲಿ ಆರೋಪ ಪ್ರತ್ಯಾರೋಪಗಳು ರಾಜಕೀಯ ಪಕ್ಷಗಳ ನಡುವೆ ಜೋರಾಗಿವೆ. ಆಮ್ ಆದ್ಮಿ ಪಕ್ಷ ರಾಜ್ಯದ ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಆದರೆ ಅದನ್ನು ಮುಚ್ಚಿಡುವ ಕಸರತ್ತಿನಲ್ಲಿ ರಾಜ್ಯ ಸರ್ಕಾರ ಜಾಹೀರಾತುಗಳಿಗಾಗಿ ಲಕ್ಷಾಂತರ ಖರ್ಚು ಮಾಡುತ್ತಿದೆ. ಯುಪಿ ಸರ್ಕಾರ ಯುಎಸ್ ನಿಯತಕಾಲಿಕೆಗಳಲ್ಲಿ 10 ಪುಟಗಳ ಜಾಹೀರಾತುಗಳನ್ನು ನೀಡಿತು. ಜನರ ಕಷ್ಟಪಟ್ಟು ದುಡಿದ ಹಣವನ್ನು ಇದಕ್ಕಾಗಿ ಖರ್ಚು ಮಾಡಿ ಜನರ ಹಣದೊಂದಿಗೆ ಚೆಲ್ಲಾಟವಾಡಿದೆ ಎಂದು ಅವರು ಆರೋಪಿಸಿದರು.
ಪ್ರತಿಸ್ಪರ್ಧಿಗಳು ಉತ್ತರಪ್ರದೇಶದಲ್ಲಿ ಸ್ಮಶಾನಗಳನ್ನು ನಿರ್ಮಿಸುವಲ್ಲಿ ಉತ್ತಮವಾಗಿದ್ದರೂ, “ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಹೇಗೆ ನಿರ್ಮಿಸುವುದು” ಎಂದು ನಮಗೆ ತಿಳಿದಿದೆ ಎಂದು ಹೇಳಿದರು. ನಾನು ಅದನ್ನು ದೆಹಲಿಯಲ್ಲಿ ಮಾಡುತ್ತೇನೆ. ಹಾಗೆಯೇ ಉತ್ತರ ಪ್ರದೇಶದಲ್ಲಿಯೂ ಮಾಡುತ್ತೇನೆ ಎಂದರು. ಪಂಜಾಬ್ನಲ್ಲಿಯೂ ಅಭಿವೃದ್ಧಿ ಪಿಚ್ ಮಾಡುತ್ತಿರುವ ದೆಹಲಿ ಮುಖ್ಯಮಂತ್ರಿ ದೆಹಲಿಯಲ್ಲಿ ತಮ್ಮ ಸರ್ಕಾರದ ಕೆಲಸವನ್ನು ಪ್ರದರ್ಶಿಸಿದರು.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದೆ. 2022ರ ನಂತರದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತಿನಲ್ಲಿ ಚುನಾವಣೆಗಳು ನಡೆಯಲಿವೆ. ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.