ಅಲಹಾಬಾದ್ : ವಿಜ್ಞಾನದ ಪ್ರಕಾರ ಹಸುವು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕ ಮಾತ್ರ ಪ್ರಾಣಿಯಾಗಿದೆ. ಹಸುವಿನ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಸಗಣಿ ಹಾಗೂ ಗೋಮೂತ್ರ ಅನೇಕ ರೋಗಗಳಿಗೆ ರಾಮಬಾಣವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಹೇಳಿದೆ.
ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್, ಗೋವನ್ನು ಕೊಂದ ಆರೋಪವನ್ನು ಎದುರಿಸುತ್ತಿರುವ ಜಾವೇದ್ ಅಲಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಸಂಬಂಧ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಹಿಂದು ಧರ್ಮದ ನಂಬಿಕೆಯ ಪ್ರಕಾರ 33 ಕೋಟಿ ದೇವರು ಹಸುವಿನಲ್ಲಿ ನೆಲೆಸಿದೆ. ಶತಮಾನಗಳಿಂದಲೂ ಹಿಂದುಗಳು ಗೋವನ್ನು ಪೂಜಿಸುತ್ತಾ ಬಂದಿದ್ದಾರೆ. ಮುಸ್ಲಿಂ ನಾಯಕರು ಕೂಡ ಗೋ ಹತ್ಯೆ ನಿಷೇಧಕ್ಕೆ ಒಪ್ಪಿಗೆ ನೀಡಿದ್ದಿದೆ ಎಂದು ಕೋರ್ಟ್ ಹೇಳಿದೆ.
ಗೋವುಗಳು ಹಿಂದು ಧರ್ಮದವರ ಭಾವನೆಯ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಗೋವಿನ ಪ್ರತಿಯೊಂದು ಉತ್ಪನ್ನವು ಮನುಷ್ಯನಿಗೆ ಲಾಭದಾಯಕವಾಗಿದೆ. ಎಷ್ಟರ ಮಟ್ಟಿಗೆ ಗೋವಿನ ದೇಹದಿಂದ ಹೊರಡುವ ಉಸಿರು ಕೂಡ ಆಮ್ಲಜನಕವೇ ಆಗಿದೆ. ಹೀಗಾಗಿ ಗೋವಿನ ಹತ್ಯೆಯು ಮನುಷ್ಯನ ಹತ್ಯೆಗೆ ಸಮ ಎಂದು ನ್ಯಾಯಮೂರ್ತಿ ಶೇಖರ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.