ಇಂಫಾಲ: ಚಿನ್, ಕುಕಿ, ಜೊಮಿ, ಮಿಜೋ ಮತ್ತು ಹ್ಮಾರ್ ಸಹಿತ ಮಣಿಪುರದ ಬುಡಕಟ್ಟು ಜನಾಂಗದವರು ಮಂಗಳವಾರ ಚುರಾಚಂದ್ಪುರದಲ್ಲಿ ಪ್ರತ್ಯೇಕವಾಗಿ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಹಿರಿಯ ಬುಡಕಟ್ಟು ನಾಯಕರು ಪರೇಡ್ ನಲ್ಲಿ ಧ್ವಜವಂದನೆ ಸ್ವೀಕರಿಸಿದರು.
ಮೇ 3 ರಂದು ರಾಜ್ಯದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟ ಝೋ ಸಮುದಾಯದ ಪಾಸ್ಟರ್ ಸೆಖೋಹಾವೊ ಅವರ ಪತ್ನಿ ಪೈ ನೆಂಗ್ಜಾಹೋಯಿಹ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಝೋಮಿ ಕೌನ್ಸಿಲ್ ಸ್ಟೀರಿಂಗ್ ಕಮಿಟಿ ಆಯೋಜಿಸಿದ ಕಾರ್ಯಕ್ರಮದಲ್ಲಿ 2,000 ಕ್ಕೂ ಹೆಚ್ಚು ಗ್ರಾಮ ರಕ್ಷಣಾ ಪಡೆ (ವಿಡಿಎಫ್) ಸಿಬ್ಬಂದಿ, ಯುವಕರು ಮತ್ತು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಜೊಮಿ ಮದರ್ಸ್ ಅಸೋಸಿಯೇಷನ್ನ ಸದಸ್ಯರು ಲಾಂಗ್ ಮಾರ್ಚ್ ಪಾಸ್ಟ್ ನೇತೃತ್ವ ವಹಿಸಿದ್ದರು. ನಂತರ ಭಾರತೀಯ ಸಂವಿಧಾನ ಮತ್ತು ತ್ರಿವರ್ಣ ಧ್ವಜಕ್ಕೆ ತಮ್ಮ ನಿಷ್ಠೆ ವ್ಯಕ್ತಪಡಿಸಿ ಪ್ರಮಾಣ ವಚನ ಸ್ವೀಕರಿಸಿದರು. ಎಲ್ಲಾ ಆಂತರಿಕ ಮತ್ತು ಬಾಹ್ಯ ಶತ್ರುಗಳ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದರು.
ನಾವು ದೇಶದ ನಾಗರಿಕರು, ಅಕ್ರಮ ವಲಸಿಗರಲ್ಲ ಎಂಬ ಸಂದೇಶ ನೀಡುವುದೇ ಸ್ವಾತಂತ್ರ್ಯ ದಿನಾಚರಣೆ ಆಯೋಜನೆ ಉದ್ದೇಶ ಎಂದು ಬುಡಕಟ್ಟು ಮುಖಂಡರೊಬ್ಬರು ತಿಳಿಸಿದರು.
“ಚಿನ್, ಕುಕಿ, ಝೋಮಿ, ಮಿಜೋ ಮತ್ತು ಹ್ಮಾರ್ ಬುಡಕಟ್ಟು ಜನಾಂಗದವರು ತಮ್ಮ ಪೂರ್ವಜರಿಂದ ಪಡೆದ ತಮ್ಮ ಸ್ವಂತ ಭೂಮಿಯಲ್ಲಿ ವಾಸಿಸುತ್ತಿದ್ದಾರೆ ಎಂಬ ಸಂದೇಶವನ್ನು ಜಗತ್ತಿಗೆ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಾಲಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರು ಮಣಿಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಕ್ಕಾಗಿ ಆದಿವಾಸಿಗಳನ್ನು ಶ್ಲಾಘಿಸಿದ್ದಾರೆ.