ಹೈದರಾಬಾದ್: ತೆಲಂಗಾಣದ ಯಾದಾದ್ರಿ ಭೋಂಗಿರ್ ಜಿಲ್ಲೆಯಲ್ಲಿ ಸಾಗುತ್ತಿದ್ದ ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್ಪ್ರೆಸ್ನಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ದುರಂತವೊಂದು ತಪ್ಪಿದೆ. ಪಗಿಡಿಪಲ್ಲಿ ಮತ್ತು ಬೊಮ್ಮಯಪಲ್ಲಿ ನಡುವೆ ಸಾಗುತ್ತಿದ್ದಾಗ ಬೋಗಿಯೊಂದರಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಎಚ್ಚೆತ್ತ ಲೋಕೋ ಪೈಲಟ್ ರೈಲನ್ನು ನಡುವೆಯೇ ನಿಲ್ಲಿಸಿದ್ದಾರೆ.
ತಕ್ಷಣವೇ ಪ್ರಯಾಣಿಕರೆಲ್ಲರೂ ಕೋಚ್ ಗಳಿಂದ ಕೆಳಗಿಳಿದಿದ್ದಾರೆ. ನಾಲ್ಕು ಬೋಗಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಎರಡು ಭಾಗಶಃ ಹಾನಿಯಾಗಿದೆ. ಯಾವುದೇ ಪ್ರಾಣಹಾನಿಯಾಗಿರುವ ಮಾಹಿತಿ ದೊರೆತಿಲ್ಲ. ಬೆಂಕಿ ಇತರ ಕೋಚ್ಗಳಿಗೆ ಹರಡುವುದನ್ನು ತಡೆಯಲು ರೈಲ್ವೆ ಸಿಬ್ಬಂದಿ ಕೋಚ್ಗಳನ್ನು ಡಿಲಿಂಕ್ ಮಾಡಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.
ಜಿಲ್ಲೆಯ ವಿವಿಧೆಡೆಯಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ರೈಲ್ವೆ ನೌಕರರು ಓವರ್ ಹೆಡ್ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಎಸ್ 4 ಕೋಚ್ ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಸ್ಥಳದಲ್ಲಿರುವ ಪ್ರಯಾಣಿಕರನ್ನು ಕರೆತರಲು ಸಿಕಂದರಾಬಾದ್ನಿಂದ ವಿಶೇಷ ರೈಲು ಹೊರಟಿದೆ. ಎಸ್ಸಿಆರ್ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಜೈನ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.