ಹೈದರಾಬಾದ್: ತೆಲಂಗಾಣದಲ್ಲಿ ಮೊಸಳೆ ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪ್ರವಾಹ ಪೀಡಿತ ಮುಲುಗು ಜಿಲ್ಲೆಯಲ್ಲಿ ಗೋದಾವರಿ ನದಿಯಿಂದ ಮೊಸಳೆ ಹೊರಬಂದಿದ್ದು, ಈ ವೇಳೆ ಅದನ್ನು ಬೇಟೆಯಾಡಿ ಮಾಂಸ ಮಾಡಿ ಮಾರುತ್ತಿದ್ದರು.
ಪೊಲೀಸರು ವಾಜೇಡು ಮಂಡಲದ ಚಂದ್ರುಪಟ್ಲ ಗ್ರಾಮದಲ್ಲಿ ಸೋಮವಾರ ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದು, ಮೊಸಳೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ತಪ್ಪಿಸಿಕೊಂಡ ಇತರ ಕಳ್ಳಬೇಟೆಗಾರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿರಂತರ ಮಳೆ ಮತ್ತು ಪ್ರವಾಹದಿಂದಾಗಿ ಹಲವಾರು ಮೊಸಳೆಗಳು ಗೋದಾವರಿ ಮತ್ತು ಕೃಷ್ಣಾ ನದಿಗಳಿಂದ ಭೂಪ್ರದೇಶಕ್ಕೆ ನುಗ್ಗುತ್ತಿವೆ. ಗದ್ದೆಗಳು, ಕೊಳಗಳು ಮತ್ತು ಇತರ ಜಲಮೂಲಗಳಲ್ಲಿ ಅವುಗಳು ಆಶ್ರಯ ಪಡೆದುಕೊಂಡಿರುವುದು ಕೃಷಿಕರ ಚಿಂತೆಗೆ ಕಾರಣವಾಗಿದೆ, ವನಪರ್ತಿ, ಗದ್ವಾಲ್, ನಾರಾಯಣಪೇಟೆ ಮತ್ತು ಮುಳುಗು ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ನದಿಗೆ ತಾಗಿಕೊಂಡಿರುವ ಪ್ರದೇಶಗಳಲ್ಲಿ ಮೊಸಳೆಗಳು ಕಾಣಿಸಿಕೊಂಡಿವೆ.