ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿದ್ದರೂ ಸಹ ಬುರ್ಗುಲ್ ಗ್ರಾಮಕ್ಕೆ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಜಿ.ವಿವೇಕ್ ವೆಂಕಟಸ್ವಾಮಿ ಅವರು ಪಕ್ಷದ ‘ಪಲ್ಲೆ ಗೋಸಾ-ಬಿಜೆಪಿ ಭರೋಸಾ’ ಯಾತ್ರೆಯ ಭಾಗವಾಗಿ ಬಿಜೆಪಿ ಧ್ವಜವನ್ನು ಹಾರಿಸಲು ನಿಜಾಮಸಾಗರ ಮಂಡಲದ (ಬ್ಲಾಕ್) ಬೂರ್ಗುಲ್ ಗ್ರಾಮಕ್ಕೆ ತೆರಳುತ್ತಿದ್ದರು.
ಪೊಲೀಸ್ ಅಧಿಕಾರಿಗಳು ಬಿಜೆಪಿ ನಾಯಕರಿಗೆ ಗ್ರಾಮದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಮಕ್ಕೆ ಭೇಟಿ ನೀಡಲು ಅನುಮತಿ ಇಲ್ಲ ಎಂದು ವಿವರಿಸಿದರು.
ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಬಲವಂತವಾಗಿ ದಾರಿ ತಪ್ಪಿಸಲು ಪ್ರಯತ್ನಿಸಿದರು. ಇದು ಎರಡೂ ಕಡೆಗಳ ನಡುವೆ ಜಗಳಕ್ಕೆ ಕಾರಣವಾಯಿತು.
ಬಿಜೆಪಿ ನಾಯಕರು ಮತ್ತು ಅವರ ಬೆಂಬಲಿಗರು ರಸ್ತೆಯಲ್ಲಿ ಧರಣಿ ಆರಂಭಿಸಿದರು. ಪೊಲೀಸರು ನಾಯಕರನ್ನು ವಶಕ್ಕೆ ತೆಗೆದುಕೊಂಡು ಅವರನ್ನು ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು. ಗುರುವಾರ ರಾತ್ರಿ ಬೂರ್ಗುಲ್ ಗ್ರಾಮದಲ್ಲಿ ಬಿಜೆಪಿ ಧ್ವಜವನ್ನು ಹಾರಿಸಲು ಎತ್ತರಿಸಲಾಗಿದ್ದ ವೇದಿಕೆಯನ್ನು ಕೆಲವರು ನೆಲಸಮಗೊಳಿಸಿದಾಗ ಉದ್ವಿಗ್ನತೆ ಪರಿಸ್ಥಿತಿ ಉಂಟಾಗಿತ್ತು.
ಈ ಘಟನೆಯು ಬಿಜೆಪಿ ಮತ್ತು ಆಡಳಿತಾರೂಢ ಟಿ ಆರ್ ಎಸ್ ಬೆಂಬಲಿಗರ ನಡುವೆ ಘರ್ಷಣೆಗೆ ಕಾರಣವಾಯಿತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ಗ್ರಾಮಕ್ಕೆ ರವಾನಿಸಲಾಗಿದ್ದು. ಹೊರಗಿನವರು ಗ್ರಾಮವನ್ನು ಪ್ರವೇಶಿಸುವುದನ್ನು ತಡೆಯಲು ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿದೆ.
2023 ರ ವಿಧಾನಸಭಾ ಚುನಾವಣೆಯ ಸಿದ್ಧತೆಯ ಭಾಗವಾಗಿ, ರಾಜ್ಯದಲ್ಲಿ ಟಿ ಆರ್ ಎ ಸರಕಾರ ವೈಫಲ್ಯಗಳನ್ನು ಎತ್ತಿ ತೋರಿಸಲು ಬಿಜೆಪಿ ‘ಪಲ್ಲೆ ಗೋಸಾ-ಬಿಜೆಪಿ ಭರೋಸಾ’ ಯಾತ್ರೆಯನ್ನು ಪ್ರಾರಂಭಿಸಿದೆ.