ತೆಲಂಗಾಣ: ಇಲ್ಲಿನ ನಲ್ಗೊಂಡದ ನೀರಿನ ತೊಟ್ಟಿಯಲ್ಲಿ 30 ಸತ್ತ ಕೋತಿಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.
ನೀರಿನ ಟ್ಯಾಂಕಿನ ಮುಚ್ಚಳ ತೆರೆದಿದ್ದರಿಂದ ಮಂಗಗಳು ಒಳಗೆ ಸಿಲುಕಿಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಟ್ಯಾಂಕ್ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ದೂರು ನೀಡಿದ ನಂತರ ಪುರಸಭೆಯ ಸಿಬ್ಬಂದಿ ಸತ್ತ ಮಂಗಗಳನ್ನು ಟ್ಯಾಂಕ್ನಿಂದ ತೆಗೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇನ್ನು ಭಾರತ್ ರಾಷ್ಟ್ರ ಸಮಿತಿ(ಬಿಆರ್ಎಸ್) ಮುಖಂಡ ಮತ್ತು ತೆಲಂಗಾಣ ಮಾಜಿ ಸಚಿವ ಕೆ.ಟಿ. ರಾಮರಾವ್ ಅವರು ಸತ್ತ ಕೋತಿಗಳ 30 ಶವಗಳು ಪತ್ತೆಯಾದ ನಂತರ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರವನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಟಿಆರ್, ಕಾಂಗ್ರೆಸ್ ಸರ್ಕಾರ ಸಾರ್ವಜನಿಕ ಆರೋಗ್ಯದ ಬದಲಿಗೆ ರಾಜಕೀಯಕ್ಕೆ ಆದ್ಯತೆ ನೀಡಿದ್ದರಿಂದ ಆಡಳಿತವು ಹದಗೆಟ್ಟಿದೆ. ತೆಲಂಗಾಣ ಮುನ್ಸಿಪಲ್ ಇಲಾಖೆಯಲ್ಲಿ ಎಂತಹ ನಾಚಿಕೆಗೇಡಿನ ಸ್ಥಿತಿ ಇದೆ ಎಂದರೆ ಅನುಸರಿಸಬೇಕಾದ ಮಾರ್ಗಸೂಚಿ ಪಾಲಿಸುತ್ತಿಲ್ಲ, ನಿತ್ಯ ನಿರ್ವಹಣೆ ಇಲ್ಲವಾಗಿದೆ. ನೀರಿನ ಟ್ಯಾಂಕ್ ಶುಚಿಗೊಳಿಸುತ್ತಿಲ್ಲ ಎಂದು ದೂರಿದ್ದಾರೆ.