ತೆಲಂಗಾಣ : ಇತ್ತೀಚೆಗೆ ಅನೇಕ ಸೈಬರ್ ಅಪರಾಧಗಳು ಮುನ್ನಲೆಗೆ ಬರುತ್ತಿವೆ. ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಲಕ್ಷಾಂತರ ಹಣ ಹೊಡೆಯುತ್ತಿದ್ದಾರೆ. ಇಂತದ್ದೇ ಒಂದು ಘಟನೆ ಇತ್ತೀಚೆಗಷ್ಟೇ ಸೈಬರ್ ಅಪರಾಧಿಯೊಬ್ಬ ಕಲೆಕ್ಟರ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ, ಹಣ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸೈಬರ್ ಕ್ರಿಮಿನಲ್, ತೆಲಂಗಾಣದ ನಾರಾಯಣಪೇಟೆ ಜಿಲ್ಲಾಧಿಕಾರಿ ಹರಿಚಂದನಾ ಅವರ ಹೆಸರು ಹಾಗೂ ಫೋಟೋ ಬಳಸಿ ನಕಲಿ ವಾಟ್ಸ್ಆಯಪ್ ಖಾತೆ ಸೃಷ್ಟಿಸಿದ್ದನು. ಈ ವಾಟ್ಸ್ಆಯಪ್ ಖಾತೆಯಿಂದ ಹಲವು ಅಧಿಕಾರಿಗಳು ಹಾಗೂ ಸೆಲೆಬ್ರಿಟಿಗಳಿಗೆ ತಾವು ಮೀಟಿಂಗ್ನಲ್ಲಿದ್ದೇವೆ, ತಕ್ಷಣ ವಸ್ತು ಖರೀದಿಸಲು ನಗದು ಬೇಕು ಎಂದು ಸಂದೇಶ ರವಾನಿಸಿದ್ದಾನೆ. ಈ ಸಂದೇಶವನ್ನು ನೋಡಿದ ಜಿಲ್ಲಾ ಕೇಂದ್ರದ ವ್ಯಕ್ತಿಯೊಬ್ಬರು ಈ ನಕಲಿ ಖಾತೆಗೆ 2.40 ಲಕ್ಷ ರೂ. ಹಾಕಿದ್ದಾನೆ. ಆದ್ರೆ, ಸ್ವಲ್ಪ ಹೊತ್ತಿನ ನಂತರ ಅನುಮಾನಗೊಂಡ ಇವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ವಾಟ್ಸ್ಆಯಪ್ನಲ್ಲಿ ಸಂದೇಶ ನೀಡಿದ್ದು ಜಿಲ್ಲಾಧಿಕಾರಿ ಅಲ್ಲ, ಸೈಬರ್ ಕ್ರಿಮಿನಲ್ ಎಂದು ಪೊಲೀಸರು ಕಂಡಿಹಿಡಿದಿದ್ದಾರೆ.
ಈ ವ್ಯಕ್ತಿಯನ್ನು ಜಾರ್ಖಂಡ್ ಮೂಲದವನು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ಗೆ ದೂರು ನೀಡಲಾಗಿದೆ.
ದೇಶ ಮತ್ತು ರಾಜ್ಯಾದ್ಯಂತ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರಕು ಆರ್ಡರ್ ಹೆಸರಿನಲ್ಲಿ ಲಾಟರಿ ಹೊಡೆದಿದೆ, ಆಫರ್ಗಳು ಬಂದಿವೆ, ಮತ್ತೊಂದೆಡೆ ನಕಲಿ ಫೇಸ್ ಬುಕ್ , ಟ್ವಿಟರ್ , ವಾಟ್ಸಪ್ ಖಾತೆಗಳನ್ನು ಸೃಷ್ಟಿಸಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಸೈಬರ್ ಕ್ರೈಂ ಬಗ್ಗೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡುತ್ತಿದೆ. ಆದರೆ, ಹಲವರು ಸೈಬರ್ ಕ್ರಿಮಿನಲ್ಗಳ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ.