ತಮಿಳುನಾಡು: ದಸರಾ ಅಂಬಾರಿ ಹೊತ್ತಿದ್ದ, ಆನೆ ಹೊತ್ತು ಸಾಗುತ್ತಿದ್ದ ವಾಹನ ಅಪಘಾತಕ್ಕಿಡಾಗಿದೆ. ರಾಜ್ಯದ ಗಡಿಭಾಗ ತಮಿಳುನಾಡಿನ ಸಾನಮಾವು ಸಮೀಪದ ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಆರೋಗ್ಯ ಸ್ವಾಮಿ ಎಂಬ ಚಾಲಕ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ದಸರಾ ಅಂಬಾರಿ ಉತ್ಸವ ಇತ್ತು. ಹೀಗಾಗಿ ಅಂಬಾರಿ ಹೊರಲು ತಿರುಚ್ಚಿಯಿಂದ ಆನೆ ಬಂದಿತ್ತು. ಅಂಬಾರಿ ಉತ್ಸವನ್ನು ಮುಗಿಸಿಕೊಂಡು, ಆನೆಯನ್ನು ಈಚರ್ ವಾಹನದಲ್ಲಿ ಆರು ಮಂದಿ ಕರೆದೊಯ್ಯುತ್ತಿದ್ದರು.
ಸಾನಮಾವು ಸಮೀಪದಲ್ಲಿ ಚಾಲಕ ಆರೋಗ್ಯಸ್ವಾಮಿ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ವಾಹನ, ಅರಣ್ಯ ಪ್ರದೇಶದ ಒಳಗೆ ಚಲಿಸಿದೆ. ಇದನ್ನು ಕಂಡ ಚಾಲಕ ಚಲಿಸುತ್ತಿದ್ದ ವಾಹನ ನಿಲ್ಲಿಸಲು ಓಡಿದ್ದಾನೆ. ದುರಾದೃಷ್ಟವಶಾತ್ ಚಾಲಕ ಆರೋಗ್ಯ ಸ್ವಾಮಿ ಮೇಲೆ ವಾಹನ ಹರಿದಿದೆ. ಇನ್ನು, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕ್ರೇನ್ ಹಾಗೂ ಜೆಸಿಬಿ ಮೂಲಕ ಆನೆ ಇದ್ದ ವಾಹನವನ್ನ ಹೊರಕ್ಕೆ ತೆಗೆದಿದ್ದಾರೆ.