ಕೊಲಂಬೋ: ಶ್ರೀಲಂಕಾದ ಜಲಗಡಿಯನ್ನು ಪ್ರವೇಶಿಸಿದ ಆರೋಪದಲ್ಲಿ ಅಲ್ಲಿನ ನೌಕಾಪಡೆ ಆರು ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ಬಗ್ಗೆ ಮಂಗಳವಾರ ಶ್ರೀಲಂಕಾದ ನೌಕಾಪಡೆ ಹೊರಡಿಸಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಡೆಲ್ಫ್ ದ್ವೀಪದಲ್ಲಿ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಬಂಧಿತರನ್ನು ಕಂಕಾಸುಂತುರೈ ಬಂದರಿಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕೆ ಮೈಲಾಡಿ ಮೀನುಗಾರಿಕಾ ಇನ್ಸ್ಪೆಕ್ಟರ್ ಗೆ ಹಸ್ತಾಂತರಿಸಲಾಗಿದೆ.
ಕಳೆದವಾರವೂ ಇಂತಹ ಪ್ರಕರಣ ನಡೆದಿದ್ದು, ೧೮ ಭಾರತೀಯ ಮೀನುಗಾರರನ್ನು ಬಂಧಿಸಿ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ತಮಿಳುನಾಡು ಹಾಗು ಶ್ರೀಲಂಕಾವನ್ನು ಬೇರ್ಪಡಿಸುವ ಪಾಕ್ ಜಲಸಂಧಿ ಮೀನುಗಳು ಹೇರಳವಾಗಿ ದೊರೆಯುವ ಸ್ಥಳವಾಗಿದ್ದು, ಅಲ್ಲಿ ಹಲವಾರು ಬಾರಿ ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿ ದೋಣಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿವೆ.