ಕೊಯಮತ್ತೂರು: ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ರಾಜಧಾನಿಯನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ನಟ ರಾಜಕಾರಣಿ ಕಮಲ್ ಹಾಸನ್ ಹೇಳಿಕೆಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ವಿರೋಧಿಸಿದ್ದಾರೆ.
ಅಣ್ಣಾಮಲೈ ಅವರು ಈ ವಿಷಯದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಕಮಲ್ ಹಾಸನ್ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ತಮ್ಮ ತಲೆಯನ್ನು ಪರೀಕ್ಷಿಸಬೇಕು ಎಂದರು. ಕಮಲ್ ಹಾಸನ್ ಅಥವಾ ಬೇರೆ ಯಾರೇ ಆಗಿರಲಿ, ಯಾರೇ ಹೇಳಿದರೂ ಅವರ ಮೆದುಳನ್ನು ಮಾನಸಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಎಡ ಮತ್ತು ಬಲ ಮಿದುಳುಗಳೆರಡೂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ಅವರು ಪ್ರಜ್ಞೆ ಹೊಂದಿದ್ದಾರೆಯೇ ಮತ್ತು ಅವರು ತಮ್ಮ ಆಹಾರವನ್ನು ಸರಿಯಾಗಿ ತಿನ್ನುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ಟೀಕಿಸಿದ್ದಾರೆ.
ಭಾರತದ ರಾಜಧಾನಿಯನ್ನು ನಾಗ್ಪುರಕ್ಕೆ ಹೇಗೆ ಬದಲಾಯಿಸಬಹುದು? ನಾಗ್ಪುರದಲ್ಲಿ ಆರ್ಎಸ್ಎಸ್ ಕಚೇರಿ ಇದೆ ಎಂದು ಕಮಲ್ ಹಾಸನ್ ಅರಿತುಕೊಂಡು ಇದ್ದಕ್ಕಿದ್ದಂತೆ ಭಾರತದ ರಾಜಧಾನಿಯನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ತೀರ್ಮಾನಿಸಿದ್ದಾರೆ. ಚೆನ್ನೈ ದೇಶದ ಬೇಸಿಗೆ/ಚಳಿಗಾಲದ ರಾಜಧಾನಿಯಾಗಬೇಕು ಎಂದು ಅವರು ಹೇಳಿದ್ದರೆ, ನಾನು ಅದನ್ನು ಒಪ್ಪಿಕೊಳ್ಳಬಹುದು. ಆದರೆ ಅವರು ಈ ರೀತಿ ಹೇಳಿರುವುದರಿಂದ ಕಮಲ್ ಹಾಸನ್ ಅವರ ತಲೆಯನ್ನು ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ಪರೀಕ್ಷಿಸಬೇಕು ಎಂದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅವರ ಅಜೆಂಡಾ ರಾಷ್ಟ್ರ ರಾಜಧಾನಿಯನ್ನು ನವದೆಹಲಿಯಿಂದ ನಾಗ್ಪುರಕ್ಕೆ ಸ್ಥಳಾಂತರಿಸುವುದನ್ನು ಒಳಗೊಂಡಿದೆ. ಈ ಕ್ರಮವು ರಾಷ್ಟ್ರದ ಸೆಕ್ಯುಲರ್ ಫ್ಯಾಬ್ರಿಕ್ ಅನ್ನು ದುರ್ಬಲಗೊಳಿಸುತ್ತದೆ ಮತ್ತು ಇದು ಭಾರತವನ್ನು ಧಾರ್ಮಿಕ, ಏಕದೇವತಾವಾದಿ ರಾಜ್ಯವನ್ನಾಗಿ ಪರಿವರ್ತಿಸುತ್ತದೆ, ಹಿಂದಿಯನ್ನು ಅಧಿಕೃತ ಭಾಷೆಯಾಗಿ ಕಡ್ಡಾಯಗೊಳಿಸಲಾಗುತ್ತದೆ ಮತ್ತು ಪಠ್ಯಕ್ರಮದಲ್ಲಿ ಇತಿಹಾಸದ ಬದಲಿಗೆ ಪುರಾಣ ಹಾಕುತ್ತಾರೆ ಎಂದು ಕಮಲ್ ಆರೋಪಿಸಿದ್ದರು.
ತಮಿಳುನಾಡಿನ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ಕಮಲ್ ಹಾಸನ್ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ರಾಷ್ಟ್ರಧ್ವಜವನ್ನು ಅದರ ತ್ರಿವರ್ಣ ವಿನ್ಯಾಸದಿಂದ ಒಂದೇ ಬಣ್ಣಕ್ಕೆ ಬದಲಾಯಿಸುತ್ತಾರೆ ಎಂದು ಆರೋಪಿಸಿದ್ದಾರೆ.