ಚೆನ್ನೈ: ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪ ಜೊತೆಗೆ ರಾತ್ರಿ 10 ಗಂಟೆಯ ನಂತರವೂ ಪ್ರಚಾರ ನಡೆಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಕೊಯಮತ್ತೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಗಡುವು ಮೀರಿ ಬಿಜೆಪಿ ಪ್ರಚಾರ ನಡೆಸಿದ್ದಕ್ಕೆ ಡಿಎಂಕೆ ಮತ್ತು ಎಡಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಸೆಕ್ಷನ್ 143, 341 ಮತ್ತು 290 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಡಿಎಂಕೆ ನೀಡಿದ ದೂರಿನ ಮೇಲೆ ಬಿಜೆಪಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಣ್ಣಾಮಲೈ ಅವರು ಸೋಲಿನ ಭಯದಿಂದ ಭಯೋತ್ಪಾದನೆ ಮತ್ತು ಗಲಭೆಗಳನ್ನು ಪ್ರಚೋದಿಸುತ್ತಾರೆ. ದುರಹಂಕಾರದ ಬಗ್ಗೆ ಮಾತನಾಡುವ ಪ್ರಧಾನಿಗಳು, ಅಣ್ಣಾಮಲೈ ಅವರಿಗೆ ಜ್ಞಾನಾರ್ಜನೆ ನೀಡಬೇಕು ಎಂದು ಡಿಎಂಕೆ ವಕ್ತಾರ ಎ.ಸರವಣನ್ ಹೇಳಿದ್ದರು.
ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ. ರಾತ್ರಿ 10 ಗಂಟೆಯ ನಂತರ ಜನರನ್ನು ಭೇಟಿ ಮಾಡಲು ನನಗೆ ಎಲ್ಲ ಹಕ್ಕಿದೆ. ಯಾವ ಚುನಾವಣಾ ಆಯೋಗವು ನಿಮ್ಮನ್ನು ತಡೆಯುತ್ತದೆ? ಆದೇಶ ಎಲ್ಲಿದೆ, ನೀವು ನನಗೆ ತೋರಿಸುತ್ತೀರಾ ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.