ಚೆನ್ನೈ: ಲೋಕಸಭಾ ಚುನಾವಣಾ ಹೊತ್ತಲ್ಲೆ ಕಪ್ಪು ಚುಕ್ಕೆಯಂತೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಾಗಿದೆ. ಡಿಎಂಕೆ ಕಾರ್ಯಕರ್ತರು ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ ಎಂಬ ಗ್ರಾಮದ 45 ವರ್ಷದ ಮಹಿಳೆಯೊಬ್ಬರನ್ನು ಥಳಿಸಿ, ಹತ್ಯೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ʻಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿʼ ಪೋಸ್ಟ್ ಮಾಡಿದ ಆರೋಪದಡಿ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಡಲೂರು ಜಿಲ್ಲಾ ಪೊಲೀಸರು ಅಣ್ಣಾಮಲೈ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ʻಲೋಕಸಭೆ ಚುನಾವಣೆ ಅಂಗವಾಗಿ ಏಪ್ರೀಲ್ 19ರಂದು ನಡೆದಿದ್ದ ಮತದಾನ ವೇಳೆ, ಆಡಳಿತಾರೂಢ ಡಿಎಂಕೆ ವಿರುದ್ಧ ಗೋಮತಿ ಎಂಬುವವರು ಮತ ಚಲಾವಣೆ ಮಾಡಿದಕ್ಕೆ ಪಕ್ಷದ ಕಾರ್ಯಕರ್ತರು ಆಕೆಯನ್ನು ಥಳಿಸಿ, ಕೊಂದಿದ್ದರು. ಗೋಮತಿ ಅವರನ್ನು ಹತ್ಯೆ ಮಾಡಿರುವ ಡಿಎಂಕೆ ಕಾರ್ಯಕರ್ತರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲʼ ಎಂದು ಆರೋಪಿಸಿ ಅಣ್ಣಾಮಲೈ ಏಪ್ರೀಲ್ 21ರಂದು ʻಎಕ್ಸ್ʼ ನಲ್ಲಿ ಪೋಸ್ಟ್ ಮಾಡಿದ್ದರು.