ಚೆನ್ನೈ: ಕಳೆದ ವರ್ಷದಿಂದ ಕುವೈತ್ನಲ್ಲಿ ಬಂಧಿಯಾಗಿದ್ದ ತಮಿಳುನಾಡಿನ 19 ಯುವಕರನ್ನು ಭಾರತೀಯ ರಾಯಭಾರಿ ಕಚೇರಿ ರಕ್ಷಿಸಿದ್ದು, ಗುರುವಾರ ಚೆನ್ನೈ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ವಿಮಾನ ನಿಲ್ದಾಣದಲ್ಲಿ ಯುವಕರನ್ನು ತಮಿಳುನಾಡು ಸಚಿವ ಕೆ. ಮಸ್ತಾನ್ ಮತ್ತು ಇತರ ಅಧಿಕಾರಿಗಳು ಸ್ವಾಗತಿಸಿದರು.
ಯುವಕರು ಟ್ರಾವೆಲ್ ಏಜೆನ್ಸಿಯೊಂದಕ್ಕೆ ತಲಾ ಒಂದು ಲಕ್ಷ ರೂ. ಪಾವತಿಸಿದ್ದು, ಕುವೈತ್ನಲ್ಲಿ ಪ್ರತಿ ತಿಂಗಳು ಊಟ, ವಸತಿಯೊಂದಿಗೆ ಪ್ರತಿ 60 ಸಾವಿರದ ಉದ್ಯೋಗದ ಭರವಸೆ ನೀಡಲಾಗಿತ್ತು. ಬಳಿಕ 2022ರಲ್ಲಿ ಅವರನ್ನು ಕುವೈತ್ ಗೆ ಕರೆದೊಯ್ಯಲಾಗಿತ್ತು. ನಂತರ ಅವರ ನಿಜವಾದ ಯಮಯಾತನೆ ಆರಂಭವಾಗಿತ್ತು. ಯುವಕರಿಗೆ ಕೇವಲ 18 ಸಾವಿರ ವೇತನ ನೀಡಲಾಗುತ್ತಿತ್ತು. ಅಲ್ಲದೆ ಊಟ, ವಸತಿಗೆ ಹೆಚ್ಚಿನ ಹಣ ನೀಡಬೇಕೆಂದು ಸೂಚಿಸಲಾಗಿತ್ತು. ಈ ನಡುವೆ ಯುವಕರಿಗೆ ಬಾಂಡ್ ಮೇಲೆ ಸಹಿಹಾಕಿಸಿಕೊಳ್ಳಲಾಗಿತ್ತು.
ಯುವಕರು ತಮ್ಮನ್ನು ಈ ಯಮಯಾತನೆಯಿಂದ ಬಿಡುಗಡೆ ಮಾಡಬೇಕೆಂದು ಏಜೆನ್ಸಿಯವರಲ್ಲಿ ಕೇಳಿಕೊಂಡಾಗ ತಲಾ 60,000 ರೂ. ನೀಡಬೇಕೆಂದು ಉದ್ಯೋಗದಾತ ಸಂಸ್ಥೆ ಒತ್ತಾಯಿಸಿತು. ವೀಸಾ ಅವಧಿ ಮುಗಿದಿದ್ದು, ವೀಸಾ ನವೀಕರಣಕ್ಕೆ ತಲಾ 1,25,000 ರೂ. ಪಾವತಿಸಬೇಕು ಎಂದು ಈ ವರ್ಷದ ಜೂನ್ನಲ್ಲಿ ಯುವಕರಿಗೆ ತಿಳಿಸಲಾಗಿತ್ತು. ಆದರೆ ಹಣವಿಲ್ಲದ ಕಾರಣ ಯುವಕರು ಅಸಹಾಯಕರಾಗಿದ್ದರು. ಮುಂದುವರಿದು ಯುವಕರಿದ್ದ ಕೊಠಡಿಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಲಾಗಿತ್ತು.
ಈ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಯುವಕರ ಬಿಡುಗಡೆಗೆ ಕ್ರಮ ಕೈಗೊಂಡಿದ್ದರು.