ಚೆನ್ನೈ,ಡಿ.9 : ತಮಿಳುನಾಡಿನ ಕುನೂರು ಸಮೀಪ ಪತನಗೊಂಡ ಸೇನಾ ಹೆಲಿಕಾಪ್ಟರ್ನ ಬ್ಲಾಕ್ಬಾಕ್ಸ್ ಪತ್ತೆಯಾಗಿದೆ. ನಿನ್ನೆ ಕುನೂರು ಬಳಿ ಪತನವಾದ ವಾಯುಪಡೆಯ ಹೆಲಕಾಪ್ಟರ್ನ ಬ್ಲಾಕ್ಬಾಕ್ಸ್ ಇಂದು ಪತ್ತೆಯಾಗಿದ್ದು, ಅಪಘಾತದ ಕೆಲವೊಂದು ಅನುಮಾನಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.
ಸೇನಾಪಡೆಗಳ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಸೇರಿದಂತೆ 13 ಮಂದಿ ಹುತಾತ್ಮರಾದ ಕುನೂರು ಹೆಲಿಕಾಪ್ಟರ್ ದುರಂತದ ನಂತರ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದ್ದು, ಈ ಅನುಮಾನಗಳಿಗೆ ಬ್ಲಾಕ್ಬಾಕ್ಸ್ ಪತ್ತೆಯಿಂದ ನಿಖರ ಉತ್ತರಗಳು ಸಿಗುವ ಸಾಧ್ಯತೆಯಿದೆ.
ವಿಂಗ್ ಕಮಾಂಡರ್ ಆರ್.ಭಾರದ್ವಾಜ್ ನೇತೃತ್ವದ ತಂಡ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹತ್ವದ ಮಾಹಿತಿ ದೊರಕಬಹುದಾದ ರಷ್ಯಾ ನಿರ್ಮಿತ ಎಂಐ17 ವಿ5 ಹೆಲಿಕಾಪ್ಟರ್ ಬ್ಲಾಕ್ ಬಾಕ್ಸ್ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಗ್ರೂಪ್ ಕಾಪ್ಟನ್ ವರುಣ್ ಸಿಂಗ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಬ್ಲಾಕ್ಬಾಕ್ಸ್ ಮತ್ತು ವರುಣ ಸಿಂಗ್ ಅವರಿಂದಲೇ ಘಟನೆಯ ಕುರಿತು ಮಹತ್ವದ ಮಾಹಿತಿ ದೊರೆಯಲಿದೆ. ನಿನ್ನೆ ಸಿಡಿಎಸ್ ಬಿಪಿಎನ್ ರಾವತ್ ಮತ್ತು ಪತ್ನಿ ಸೇರಿ ಸೇನಾ ಅಧಿಕಾರಿಗಳು ಪ್ರಯಾಣ ಮಾಡುತ್ತಿದ್ದ ವಾಯುಸೇನಾ ಹೆಲಿಕಾಪ್ಟರ್ ಮಧ್ಯಾಹ್ನ 12.20ರ ಹೊತ್ತಿಗೆ ಕೊನೂರು ಬಳಿ ಅಪಘಾತಕ್ಕೀಡಾಗಿ 13 ಮಂದಿ ಮೃತಪಟ್ಟಿದ್ದರು.
ಸಾಮಾನ್ಯವಾಗಿ ಪ್ರಮುಖ ನಾಯಕರು ಪ್ರಯಾಣ ಮಾಡುವ ಮೊದಲು ಚಾಪರ್ಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಅದರಲ್ಲೂ ವಿಐಪಿಗಳು ಬಳಸುವ ಎಂಐ17 ವಿ5 ಹೆಲಿಕಾಪ್ಟರ್ ಅತ್ಯುತ್ತಮ ಗುಣಮಟ್ಟದ ಕಾಪ್ಟರ್ ಅಪಘಾತದ ಉದಾಹರಣೆ ತೀರಾ ಕಡಿಮೆ. ಹಾಗಿದ್ದರೂ ಅಪಘಾತವಾಗಲು ಕಾರಣ ಏನು ಎಂಬುದರ ಬಗ್ಗೆ ತನಿಖೆ ತೀವ್ರಗೊಂಡಿದೆ. ಹೆಲಿಕಾಪ್ಟರ್ ಪತನಕ್ಕೆ ಊಟಿ ಬಳಿ ಆವರಿಸಿದ್ದ ದಟ್ಟವಾದ ಮಂಜು ಕಾರಣವೇ? ಎಂಬ ಅನುಮಾನ ಉಂಟಾಗಿದೆ.
ಸಾಮಾನ್ಯ ಹೆಲಿಕಾಪ್ಟರ್ ಆಗಲಿ, ವಿಐಪಿ ಹೆಲಿಕಾಪ್ಟರ್ಗಳಾಗಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದ್ದಾಗ ಹಾರಾಟಕ್ಕೆ ಅನುಮತಿ ಇರುವುದಿಲ್ಲ. ಅದರಲ್ಲೂ ಸಿಡಿಎಸ್ನಂತಹ ಉನ್ನತ ಹುದ್ದೆಯಲ್ಲಿರುವವರ ಹೆಲಿಕಾಪ್ಟರ್ ಹಾರಾಟಕ್ಕಂತೂ ಅನುಮತಿ ಸಿಗುವುದೇ ಇಲ್ಲ. ವೆಲ್ಲಿಂಗ್ಟನ್ ಬಳಿಯೂ ದಟ್ಟವಾದ ಮಂಜು ಆವರಿಸಿದ್ದರೆ ಹೆಲಿಕಾಪ್ಟರ್ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಲೇ ಇರಲಿಲ್ಲ. ಹೆಲಿಕಾಪ್ಟರ್ ಗಾಳಿಯಲ್ಲಿ ಹೆಚ್ಚು ಹೊತ್ತು ಹಾರಾಟ ನಡೆಸಿಲ್ಲ. ಸುಲೂರಿನಿಂದ ವೆಲ್ಲಿಂಗ್ಟನ್ಗೆ 80 ಕಿ.ಮೀ ಇದೆ. ಅರ್ಧಗಂಟೆಯಲ್ಲಿ ತಲುಪಬಹುದು.
20ರಿಂದ 25 ನಿಮಿಷ ಮಾತ್ರ ಹೆಲಿಕಾಪ್ಟರ್ ಹಾರಾಡಿದೆ. ನಂತರ ಕಡಿಮೆ ಅವಯಲ್ಲಿ ಹೆಲಿಕಾಪ್ಟರ್ ಕ್ರಾಶ್ ಆಗಿದೆ. ತುಂಬ ಎತ್ತರದಲ್ಲೂ ಹಾರಾಟ ನಡೆಸಿಲ್ಲ. ಪೈಲೆಟ್ನ ವಾಯ್ಸ್ ರೆಕಾರ್ಡ್ ಡಾಟಾ ರೆಕಾರ್ಡ್ ಆಗಿರುತ್ತದೆ. ವಾಯುಪಡೆ ರೆಕಾಡ್ರ್ಸ್ನ್ನು ಪತ್ತೆಹಚ್ಚಿದರೆ ಅಸಲಿ ಕಾರಣ ತಿಳಿಯುತ್ತದೆ. ಬ್ಲಾಕ್ಬಾಕ್ಸ್ ಪತ್ತೆಯಾಗಿರುವುದರಿಂದ ಘಟನೆಗೆ ಕಾರಣ ಏನೆಂದು ಸ್ಪಷ್ಟವಾಗುವ ಸಾಧ್ಯತೆಯಿದೆ.