ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ ನಿಧನರಾಗಿದ್ದಾರೆ. ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ, ತಮಿಳುನಾಡು ರಾಜ್ಯಪಾಲರಾಗಿ ಅವರು ಸೇವೆ ಸಲ್ಲಿಸಿದ್ದರು.
ರೋಸಯ್ಯ ಅವರು ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿ 63 ದಿನಗಳ ಕಾಲ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಗವರ್ನರ್ ಆಗಿ ಸೇವೆ ಅವರು ಸಲ್ಲಿಸಿದ್ದರು.
ಹೈದರಾಬಾದ್ ನ ನಿವಾಸದಲ್ಲಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ರೋಸಯ್ಯ ಅವರು ಕಾಂಗ್ರೆಸ್ ಹಿರಿಯ ನಾಯಕರಾಗಿದ್ದರು. ಹಲವು ಬಾರಿ ಹಣಕಾಸು ಸಚಿವರಾಗಿದ್ದರು. 7 ಬಾರಿ ಬಜೆಟ್ ಮಂಡಿಸಿ ವಿವಾದರಹಿತ ರಾಜಕಾರಣಿಯಾಗಿದ್ದರು. ಮಾಜಿ ಸಿಎಂ ವೈ.ಎಸ್. ರಾಜಶೇಖರ್ ರೆಡ್ಡಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಅವರನ್ನು ಸಿಎಂ ಮಾಡಲಾಗಿತ್ತು.
ಮಾರ್ಗಮಧ್ಯೆ ಆಸ್ಪತ್ರೆಗೆ ಕರೆದೊಯ್ಯುವಾಗ ಬಿಪಿ ಕಡಿಮೆಯಾಗಿ ರೋಸಯ್ಯ ಮೃತಪಟ್ಟಿದ್ದಾರೆ. ಅವರ ಕುಟುಂಬದವರು ಯಾರೂ ರಾಜಕೀಯದಲ್ಲಿಲ್ಲ.