ಬೆಂಗಳೂರು,ಡಿ.9: ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಕನಸುಗಳನ್ನು ನನಸು ಮಾಡುವುದೇ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸಿದಂತೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಡಿಆರ್ಡಿಒ ಹಾಗೂ ಡಿಎಫ್ಆರ್ಎಲ್ ವತಿಯಿಂದ ಆಯೋಜಿಸಿದ್ದ ಸಶಸ್ತ್ರ ಪಡೆಗಳಿಗೆ ಆಹಾರ ಮತ್ತು ಲಾಜಿಸ್ಟಿಕ್ ನೆರವು ಕುರಿತ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಜನರಲ್ ಬಿಪಿನ್ ರಾವತ್ ದೇಶ ಕಂಡ ಅಪ್ರತಿಮ ನಾಯಕ. ಜೀವನದುದ್ದಕ್ಕೂ ದೇಶ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದರು. ದೇಶದ ಬಗ್ಗೆ ಅವರು ಕಂಡಿದ್ದ ಕನಸುಗಳನ್ನು ನನಸು ಮಾಡುವುದು ಇಂದಿನ ಯುವಜನಾಂಗದ ಮೇಲಿದೆ ಎಂದು ಹೇಳಿದರು.
ಪಾಕಿಸ್ತಾನ ವಿರುದ್ಧ ವಾಯುದಾಳಿ, ಬರ್ಮಾ ವಿರುದ್ದ ಸ್ಟ್ರಜಿಕಲ್ ಸ್ಟ್ರೈಕ್, ಚೀನಾ ಪಡೆಗಳನ್ನು ಹಿಮ್ಮೆಟ್ಟಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ದೇಶವು ಸ್ವಾವಲಂಬಿ ಆಗಬೇಕು ಎಂಬುದು ಅವರ ಚಿಂತನೆಯಾಗಿತ್ತು. ಹೀಗಾಗಿಯೇ ಆತ್ಮ ನಿರ್ಭರ್ ಯೋಜನೆಗೆ ಒತ್ತು ನೀಡಿದ್ದರು ಎಂದು ಸ್ಮರಿಸಿದರು.
ಡಿಆರ್ಡಿಒ ಬಯಾಲಿಜಿಕ್ ಪ್ರಯೋಗಾಲಯ ಸೇರಿದಂತೆ ರಕ್ಷಣಾ ಪಡೆಗಳಿಗೆ ಸಶಸ್ತ್ರಗಳನ್ನು ಉತ್ಪಾದಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ರಾಜಕೀಯ ಕ್ಷೇತ್ರಗಳಿಗೂ ಉತ್ಪಾದನೆ ಮಾಡಲು ಅನುಮತಿ ಕೊಟ್ಟಿದ್ದರು ಎಂದು ಹೇಳಿದರು.
ಕರ್ನಾಟಕದ ಜೊತೆ ಬಿಪಿನ್ ರಾವತ್ ಅವಿನಾಭ ಸಂಬಂಧ ಹೊಂದಿದ್ದರು. ಬೆಂಗಳೂರು, ಮಡಿಕೇರಿ ಮತ್ತಿತರ ಕಡೆ ಅನೇಕ ಸಲ ಬಂದಿದ್ದರು. ನಮ್ಮ ರಾಜ್ಯವು ಭಾರತೀಯ ಸೇನಾಪಡೆಗೆ ನೀಡಿರುವ ಕೊಡುಗೆಗಳ ಬಗ್ಗೆ ಅವರಿಗೆ ಅಪಾರವಾದ ಗೌರವವಿತ್ತು ಎಂದು ತಿಳಿಸಿದರು. ಜನರಲ್ ಕಾರ್ಯಪ್ಪ ಮತ್ತು ತಿಮ್ಮಯ್ಯ ಅವರನ್ನು ನೀಡಿದ ನಮ್ಮ ರಾಜ್ಯದ ಬಗ್ಗೆ ರಾವತ್ ಅಪಾರವಾದ ಗೌರವ ಇಟ್ಟುಕೊಂಡಿದ್ದರು. ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಮಡಿಕೇರಿಗೆ ಹೋಗುತ್ತಿದ್ದರು ಎಂದರು.
ಈ ಘಟನೆಯಿಂದಾಗಿ ಇಡೀ ದೇಶವೇ ದಿಗ್ಬ್ರಾಂತಕ್ಕೆ ಒಳಗಾಗಿದೆ. ಹೆಲಿಕಾಪ್ಟರ್ ಏಕೆ ಮತ್ತು ಹೇಗೆ ಪತನಗೊಂಡಿತು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತದೆ. ತನಿಖೆ ಮುಗಿದ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದರು.