ತಮಿಳುನಾಡಿನಲ್ಲಿ ನಡೆದ ಭೀಕರ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ 6 ಮಂದಿಯ ಗುರುತು ಪತ್ತೆಯಾಗಿದೆ.
ಹೆಲಿಕಾಪ್ಟರ್ ಹೊತ್ತು ಉರಿದ ಹಿನ್ನೆಲೆ ಎಲ್ಲಾ ಮೃತದೇಹಗಳು ಸುಟ್ಟು ಕರಕಲಾಗಿವೆ. ಈ ನಿಟ್ಟಿನಲ್ಲಿ ವ್ಯಕ್ತಿಯ ಶರೀರ ಗುರುತು ಪತ್ತೆ ಮಾಡಬೇಕಿದೆ. ಈವರೆಗೆ 6 ಮಂದಿಯ ಗುರುತು ಪತ್ತೆ ಮಾಡಲಾಗಿದೆ.
ದೆಹಲಿಯ ಕಂಟೋನ್ಮೆಂಟ್ ನ ಶವಾಗಾರದಲ್ಲಿ 10 ಸೇನಾ ನಾಯಕರ ಮೃತದೇಹಗಳನ್ನು ಇರಿಸಲಾಗಿದೆ. ವಾಯುಪಡೆ ಅಧಿಕಾರಿಗಳಾಗಿದ್ದ ಜೆಡಬ್ಲ್ಯುಒ ಪ್ರದೀಪ್ ಎ- ಸೂಲೂರು, ವಿಂಗ್ ಕಮಾಂಡರ್ ಪಿ.ಎಸ್. ಚೌಹಾಣ್ – ಆಗ್ರಾ, ಜೆಡಬ್ಲ್ಯುಒ ರಾಣಾ ಪ್ರತಾಪ್ ದಾಸ್- ಭೂವನೇಶ್ವರ್ , ಸ್ಕ್ರ್ವಾಡ್ರ್ ಲೀಡರ್ ಕುಲದೀಪ್ ಸಿಂಗ್ – ಪಿಲಾನಿ, ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜಾ – ಬೆಂಗಳುರು ಮತ್ತು ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ – ಗಜ್ಜಲ್ ಎಂದು ಗುರುತಿಸಲಾಗಿದೆ.
ಈ ಎಲ್ಲಾ ಸೇನಾಧಿಕಾರಿಗಳ ಮೃತದೇಹಗಳನ್ನು ಆಯಾ ಸ್ವಗ್ರಾಮಗಳಿಗೆ ಸ್ಥಳಾಂತರ ಮಾಡಲಾಗುವುದು. ನಂತರ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಇನ್ನೂ ಗುರುತು ಪತ್ತೆಯಾಗದ ಶರೀರಗಳನ್ನು ಕಂಟೋನ್ಮೆಂಟ್ ಶವಾಗಾರದಲ್ಲೇ ಇರಿಸಲಾಗಿದೆ.
ಹೆಲಿಕಾಪ್ಟರ್ ದುರಂತದ ತನಿಖೆಯನ್ನು ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನಡೆಸುತ್ತಿದ್ದಾರೆ. ನಿನ್ನೆ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಯತಾ ಹಾಗೂ ಬ್ರಿಗೇಡಿಯರ್ ಲಿಖ್ಬಿಂದರ್ ಸಿಂಗ್ ಲಿಡ್ಡರ್ ಅವರ ಅಂತ್ಯಕ್ರಿಯೆ ನೆರವೇರಿದೆ.