ಚೆನ್ನೈ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದಿದ್ದ ಹಂತಕ ಪೆರಾರಿವಾಲನ್ನನ್ನು 31 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 31 ವರ್ಷಗಳ ಕಾಲ ಜೈಲಿನಲ್ಲಿದ್ದ ಪೆರಾರಿವಾಲನ್ ತಮಿಳುನಾಡು ಸರ್ಕಾರದ ಮನವಿ ಮೇರೆಗೆ ಬಿಡುಗಡೆಗೊಂಡಿದ್ದಾರೆ.
ರಾಜೀವ್ ಗಾಂಧಿ ಹತ್ಯೆಯಲ್ಲಿ ಶಾಮೀಲಾಗಿದ್ದ ಏಳು ಮಂದಿಯಲ್ಲಿ ಒಬ್ಬರಾಗಿದ್ದ ಪೆರಾರಿವಾಲನ್ 30 ವರ್ಷಗಳಿಗೂ ಅಧಿಕ ಕಾಲ ಸೆರೆಮನೆ ವಾಸ ಅನುಭವಿಸಿದ್ದರು.
ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ. ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ಪೆರಾರಿ ವಾಲ್ನನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿದೆ. ಕ್ಷಮಾಪಣೆ ಅರ್ಜಿ ಬಗ್ಗೆ ರಾಷ್ಟ್ರಪತಿಗಳು ನಿರ್ಧರಿಸುವವರೆಗೆ ನ್ಯಾಯಾಲಯ ಕಾಯಬೇಕು ಎಂಬ ಕೇಂದ್ರ ಮನವಿ ಮಾಡಿತ್ತು. ಆದರೆ ರಾಷ್ಟ್ರಪತಿಗಳು ನಿರ್ಧಾರ ಕೈಗೊಳ್ಳುವ ಮೊದಲೇ ಕೋರ್ಟ್ ಬಿಡುಗಡೆ ಮಾಡಲು ಸೂಚಿಸಿದೆ.
2018ರಲ್ಲಿ ತಮಿಳುನಾಡು ಸರ್ಕಾರ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡುವಂತೆ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಪೆರಾರಿವಾಲನ್ ಅವರಿಗೆ ಕೋರ್ಟ್ ಮಾರ್ಚ್ 9 ರಂದು ಜಾಮೀನು ಮಂಜೂರು ಮಾಡಿತ್ತು. 1991ರ ಮೇ 21ರಂದು ರಾಜೀವ್ ಗಾಂಧಿ ಅವರು ಎಲ್ಟಿಟಿಇ ಉಗ್ರರಿಂದ ತಮಿಳುನಾಡಿನಲ್ಲಿ ಹತ್ಯೆಯಾಗಿದ್ದರು. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಪೆರಾರಿವಾಲನ್ ಒಬ್ಬರಾಗಿದ್ದರು. ಕಳೆದ 31 ವರ್ಷಗಳಿಂದ ಜೀವಾವಧಿ ಶಿಕ್ಷೆಯನ್ನು ಪೆರಾರಿವಾಲನ್ ಅನುಭವಿಸುತ್ತಿದ್ದರು.