ತಮಿಳುನಾಡು: ತಮಿಳುನಾಡಿನ ಬಹಳಷ್ಟು ಕಡೆ ಜಲಾಶಯಗಳು ತುಂಬಿ ಅಪಾಯದ ಮಟ್ಟ ಮೀರಿದ್ದು, ನೀರನ್ನು ಹೊರಗೆ ಹರಿಸಲಾಗುತ್ತಿದೆ. ಇದರಿಂದ ಜಲಾಶಯಗಳ ಕೆಳ ಭಾಗದಲ್ಲಿರುವವರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸೂಚನೆ ನೀಡಿವೆ. ಪುಂಡಿ ಜಲಾಶಯದಿಂದ ಮೂರು ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುವುದು, ಜಲಾಶಯದ ಕೆಳ ಭಾಗದಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಕಾರಿ ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆಯಿಂದ ತಮಿಳುನಾಡಿನ ಚನ್ನೈ ಸೇರಿದಂತೆ ಬಹುತೇಕ ಭಾಗಗಳು ಸಂಕಷ್ಟಕ್ಕೊಳಗಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇಂದೂ ಸೇರಿದಂತೆ ಮುಂದಿನ ಐದು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿನ್ನೆ ರಾತ್ರಿ ಗರಿಷ್ಠ ಮಳೆಯಾಗಿದ್ದು ಚನ್ನೈನ ಕೊರತ್ತೂರು, ಪೆರಂಬೂರು, ಅಣ್ಣಾಸಲಾಯಿ, ಟಿನಗರ್, ಗುಂಡೈ, ಅಡ್ಯಾರ್, ಪೆರುನಂಗುಡಿ, ಒಎಂಆರ್ ಸೇರಿದಂತೆ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ಇಂದು ಬೆಳಗ್ಗೆ ಕೂಡ ಸುಮಾರು 3 ಗಂಟೆ ನಿರಂತರವಾಗಿ ಮಳೆಯಾಗಿದೆ. ಮನೆಗೆ ನೀರು ನುಗ್ಗಿದ್ದರಿಂದ ಜನ ಸಾಮಾನ್ಯರು ಪರದಾಡಿದ್ದಾರೆ. ರಸ್ತೆಗಳು ಕೆರೆಗಳಂತಾಗಿದ್ದು, ಹಲವು ವಾಹನಗಳು ತೇಲಿ ಹೋಗಿವೆ.
ಚೆಂಬಾರಂಕ್ಕಮ್ ಕೆರೆಯಿಂದ ಇಂದು ಮಧ್ಯಾಹ್ನದ ವೇಳೆಗೆ 500 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುವುದು. ಕುಂದರ್ತುರ್, ತಿರುಮುದಿವಕಂ, ತಿರುನೀರಮಲೈ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಪುಜಲ್ ಜಲಾಶಯದಿಂದ 500 ಕ್ಯೂಸೆಕ್ ನೀರನ್ನು ಹೊರಗೆ ಹರಿಸುವುದಾಗಿ ಜಿಲ್ಲಾಡಳಿತ ಹೇಳಿದೆ.
ನಿನ್ನೆ ಚನ್ನೈನಲ್ಲಿ 207 ಮಿಲಿ ಮೀಟರ್ ಮಳೆಯಾಗಿದೆ. ಎನೋರೆ ಬಂದರ್ನಲ್ಲಿ 80ಮಿ.ಮಿ., ಮೀನಬಾಕಮ್ ಇಸ್ರೋ ಕೇಂದ್ರದಲ್ಲಿ 92, ಎಂಸಿಆರ್ ನಗರ್ ಕೇಂದ್ರದಲ್ಲಿ 156, ಅಣ್ಣಾ ಯೂನಿವರ್ಸಿಟಿ ಆವರಣದಲ್ಲಿ 141 ಮಿ.ಮೀ., ವಿಲ್ಲಿವಾಕಮ್ನಲ್ಲಿ 191, ಪಶ್ಚಿಮ ತಂಬರಮ್ನಲ್ಲಿ 46 ಮಿ.ಮೀ. ಮಳೆ ದಾಖಲಾಗಿದೆ.
ಚೆನ್ನೈ ಮಹಾನಗರ ಪಾಲಿಕೆ ಸಹಾಯವಾಣಿ ಕೇಂದ್ರ ಆರಂಭಿಸಿದ್ದು, ತುರ್ತು ನೆರವರಿಗೆ ತಂಡಗಳನ್ನು ಸಜ್ಜುಗೊಳಿಸಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿ ತೊಂದರೆಗೊಳಗಾದವರಿಗೆ ನೆರವು ನೀಡಲು ಅಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲಲ್ಲಿ ಮರಗಳು ಬಿದ್ದು ಹಾನಿಯಾಗಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ತೆರವುಗೊಳಿಸಲು ನಾಗರಿಕ ರಕ್ಷಣಾ ಪಡೆಗಳನ್ನು ಬಳಸಿಕೊಳ್ಳಲಾಗುತ್ತಿದೆ.
ತಮಿಳುನಾಡಿನ ಜತೆಗೆ ನೆರೆ ರಾಜ್ಯ ಪುದುಚೇರಿಯ ಹಲವು ಭಾಗಗಳಲ್ಲೂ ಮುಂದಿನ ಐದು ದಿನಗಳಲ್ಲಿ ತೀವ್ರ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.