ಸಿಕ್ಕಿಂ: ಸರ್ಕಾರವು ಮತ್ತೊಂದು ಹಿಮನದಿ ಸರೋವರ ಸ್ಫೋಟದ ಎಚ್ಚರಿಕೆಯನ್ನು ನೀಡಿದೆ. ಈಗಾಗಲೇ ಮೇಘಸ್ಟೋಟಕ್ಕೆ ಸಿಕ್ಕಿಂ ನಲುಗಿದೆ. ಪ್ರವಾಹಕ್ಕೆ ಸಿಲುಕಿ 40 ಮಂದಿ ಬಲಿಯಾಗಿದ್ದಾರೆ. ಇನ್ನು ತೀಸ್ತಾ ನದಿಯಲ್ಲಿ 22 ಶವಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. “ಲಾಚೆನ್ ಮತ್ತು ಲಾಚುಂಗ್ ನಲ್ಲಿ ಸುಮಾರು 3,000 ಜನರು ಸಿಲುಕಿದ್ದಾರೆ.
ಮೋಟರ್ ಸೈಕಲ್ ಗಳಲ್ಲಿ ಅಲ್ಲಿಗೆ ಹೋದ 3,150 ಜನರು ಸಹ ಪ್ರವಾಹದಿಂದಾಗಿ ಸಿಲುಕಿದ್ದಾರೆ. ನಾವು ಸೇನೆ ಮತ್ತು ವಾಯುಪಡೆಯ ಹೆಲಿಕಾಪ್ಟರ್ ಗಳೊಂದಿಗೆ ಎಲ್ಲರನ್ನೂ ಸ್ಥಳಾಂತರಿಸುತ್ತೇವೆ” ಎಂದು ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಜಯ್ ಭೂಷಣ್ ಪಾಠಕ್ ಹೇಳಿದ್ದಾರೆ.
ಇನ್ನು ನದಿಯ ಪಕ್ಕದ ಪ್ರದೇಶದಲ್ಲಿ ಸೇನಾ ಶಿಬಿರವಿದ್ದು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. 41 ವಾಹನಗಳು ನೀರಿನಲ್ಲಿ ಮುಳುಗಿವೆ. ಸುಮಾರು 4 ಸಾವಿರ ಜನರನ್ನು ಸುರಕ್ಷಿತವಾಗಿ 5 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದಾಗಿ ರಾಜ್ಯದಿಂದ ದೇಶಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ NH-10 ಕೂಡ ಕೊಚ್ಚಿ ಹೋಗಿದೆ. ಇದರಿಂದಾಗಿ ಸಾರಿಗೆ ಸೌಲಭ್ಯ ಸ್ಥಗಿತಗೊಂಡಿದೆ.
ರಕ್ಷಣಾ ಪಿಆರ್ಒ ಪ್ರಕಾರ, 1.30 ರ ಸುಮಾರಿಗೆ ಲ್ಹೋನಕ್ ಸರೋವರದ ಮೇಲೆ ಮೋಡ ಸ್ಫೋಟಗೊಂಡಿತು. ನಂತರ ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಯಿತು. ಇದರಿಂದಾಗಿ ನದಿಯ ನೀರಿನ ಮಟ್ಟ ಇದ್ದಕ್ಕಿದ್ದಂತೆ 15 ರಿಂದ 20 ಅಡಿಗಳಷ್ಟು ಹೆಚ್ಚಾಗಿದೆ. ಇದಾದ ನಂತರ ನದಿಯ ಅಕ್ಕಪಕ್ಕದ ಸುತ್ತಮುತ್ತಲಿನ ಪ್ರದೇಶಗಳು ಏಕಾಏಕಿ ಜಲಾವೃತಗೊಂಡಿವೆ. ಹಲವು ಮನೆಗಳಿಗೆ ನದಿ ನೀರು ನುಗ್ಗಿದೆ. ಹೀಗಾಗಿ ಹಲವಾರು ಜನ ಕಾಣೆಯಾಗಿದ್ದಾರೆ. ಅನೇಕರು ಮನೆ ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.