ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಿಲುಕಿ 40ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ನಾಪತ್ತೆಯಾಗಿದ್ದ 23 ಸೈನಿಕರಲ್ಲಿ ಏಳು ಮಂದಿಯ ಮೃತದೇಹಗಳು ಪತ್ತೆಯಾಗಿದ್ದು ಒಬ್ಬರನ್ನು ರಕ್ಷಿಸಲಾಗಿದೆ. ತೀಸ್ತಾ ನದಿಯಲ್ಲಿ ಈವರೆಗೆ 27 ಮೃತದೇಹ ಪತ್ತೆಯಾಗಿದೆ ಎಂದು ಸಿಕ್ಕಿಂ ಸರ್ಕಾರ ಹೇಳಿದೆ.
ಇನ್ನು ಇಲ್ಲಿಯವರೆಗೆ 2,411 ಸಂತ್ರಸ್ತರನ್ನ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ವಿಕೋಪದಿಂದ ಸುಮಾರು 22 ಸಾವಿರಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಸಿಕ್ಕಿಂ ಪ್ರವಾಹದಲ್ಲಿ ಸೇನೆಯ ಮದ್ದುಗುಂಡುಗಳು ನದಿ ದಡದಲ್ಲಿ ಸ್ಫೋಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ದಿಢೀರ್ ಪ್ರವಾಹದಲ್ಲಿ ಮದ್ದುಗುಂಡುಗಳು ಕೊಚ್ಚಿ ಹೋಗಿವೆ. ಈ ಸ್ಫೋಟದಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಇನ್ನು “ಲಾಚೆನ್ ಹಾಗೂ ಲಾಚುಂಗ್ನಲ್ಲಿ ಸುಮಾರು 3 ಸಾವಿರ ಜನರು ಸಿಲುಕಿಕೊಂಡಿದ್ದಾರೆ. ಅದೇ ಪ್ರದೇಶದಲ್ಲಿ ಮೋಟಾರು ಸೈಕಲ್ನಲ್ಲಿ ಸಾಗುತ್ತಿದ್ದ 3,150 ಮಂದಿ ಕೂಡ ಸಿಲುಕಿಕೊಂಡಿದ್ದಾರೆ. ನಾವು ಎಲ್ಲರನ್ನೂ ಸೇನೆ ಹಾಗೂ ವಾಯು ಪಡೆ ಹೆಲಿಕಾಪ್ಟರ್ ಮೂಲಕ ತೆರವುಗೊಳಿಸುತ್ತಿದ್ದೇವೆ” ಎಂದು ಸಿಕ್ಕಿಂನ ಮುಖ್ಯ ಕಾರ್ಯದರ್ಶಿ ವಿಜಯ್ ಭೂಷಣ್ ಪಾಠಕ್ ತಿಳಿಸಿದ್ದಾರೆ. ಇದರ ಜೊತೆ ಇನ್ನೊಂದು ಹಿಮನದಿ ಸ್ಫೋಟಗೊಳ್ಳುವ ಸಾಧ್ಯತೆ ಇರುವುದರಿಂದ ರಾಜ್ಯಕ್ಕೆ ತಮ್ಮ ಪ್ರವಾಸವನ್ನು ವಿಳಂಬಿಸುವಂತೆ ಆಡಳಿತ ಪ್ರವಾಸಿಗಳನ್ನು ಆಗ್ರಹಿಸಿದೆ.