ನವದೆಹಲಿ: ಪತಂಜಲಿ ಆಯುರ್ವೇದ ಕಂಪನಿಯ ದಾರಿ ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಆಪ್ತ ಹಾಗೂ ಪತಂಜಲಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಚಾರ್ಯ ಬಾಲಕೃಷ್ಣ ಅವರು ಇಂದು ಸುಪ್ರೀಂಕೋರ್ಟ್ ಮುಂದೆ ಹಾಜರಾದರು.
ತನ್ನ ಆದೇಶಗಳನ್ನು ಪಾಲಿಸದೇ ಉಲ್ಲಂಘಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ ರಾಮದೇವ್ ಮತ್ತು ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡ ದೇಶದ ಉನ್ನತ ನ್ಯಾಯಾಲಯ ಕ್ರಮ ಎದರಿಸಲು ರೆಡೆಯಾಗಿರಿ ಎಂದು ಹೇಳಿತು. ಅಲ್ಲದೆ, ಕಳೆದ ತಿಂಗಳು ಪತಂಜಲಿ ಕಂಪನಿ ಕೇಳಿದ್ದ ಕ್ಷಮಯಾಚನೆಯನ್ನು ತಿರಸ್ಕರಿಸಿದ ನ್ಯಾಯಾಲಯ ನಿಮ್ಮ ಕ್ಷಮೆಯಾಚನೆಯು ನಮಗೆ ಸಂತೋಷವಿಲ್ಲ ಎಂದಿತು.
ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ಬಳಿಕ ರಾಮದೇವ್ ಪರ ವಕೀಲರು, ರಾಮದೇವ್ ಮತ್ತು ಬಾಲಕೃಷ್ಣ ಇಬ್ಬರೂ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ಕ್ಷಮೆ ಕೇಳಲು ಸಿದ್ಧರಿದ್ದಾರೆ. ನಾವು ಕ್ಷಮೆಯಾಚಿಸಲು ಬಯಸುತ್ತೇವೆ ಮತ್ತು ನ್ಯಾಯಾಲಯ ಏನು ಹೇಳಿದರೂ ಅದಕ್ಕೆ ಸಿದ್ಧರಿದ್ದೇವೆ ಎಂದು ಕೈಮುಗಿದು ನ್ಯಾಯಾಲಯಕ್ಕೆ ತಿಳಿಸಿದರು. ಮಾರ್ಚ್ 21ರಂದು ಪತಂಜಲಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಚಾರ್ಯ ಬಾಲಕೃಷ್ಣ, ಸುಪ್ರೀಂಕೋರ್ಟ್ಗೆ ಅಫಿಡೆವಿಟ್ ಸಲ್ಲಿಸಿ, ತಮ್ಮ ತಪ್ಪು ಜಾಹಿರಾತುಗಳ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿ, ಕ್ಷಮೆಯಾಚಿಸಿದರು. ಅಲ್ಲದೇ ಭವಿಷ್ಯದಲ್ಲಿ ಇಂತಹ ತಪ್ಪು ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.