ಪಂಜಾಬ್ : ಭತ್ತ ಖರೀದಿಸಲು ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಪಂಜಾಬ್, ಹರಿಯಾಣದಲ್ಲಿ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಈ ಹಿನ್ನೆಲೆ ಇಂದಿನಿಂದ ರೈತರ ಹಿತಾಸಕ್ತಿ ದೃಷ್ಟಿಯಿಂದ ಭತ್ತ ಖರೀದಿ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಭಾನುವಾರ ಹರಿಯಾಣ ಹಾಗೂ ಪಂಜಾಬ್ ರಾಜ್ಯದಲ್ಲಿ ಭಾರತೀಯ ಆಹಾರ ನಿಗಮದಿಂದ ಭತ್ತ ಖರೀದಿ ಮಾಡಲಾಗುವುದು. ಎಫ್ಸಿಐ ರೈತರಿಂದ ನೇರವಾಗಿ ಭತ್ತವನ್ನು ಖರೀದಿಸಲಿದೆ.
ಕೇಂದ್ರ ಸರ್ಕಾರ ಭತ್ತ ಖರೀದಿ ಘೋಷಣೆ ಮಾಡಿದ ನಂತರ ರೈತರು ನಡೆಸುತ್ತಿದ್ದ ಧರಣಿಯನ್ನು ವಾಪಾಸ್ ಪಡೆಯಲಾಗಿದೆ ಎಂದು ಕೇಂದ್ರ ಆಹಾರ ಇಲಾಖೆಯ ರಾಜ್ಯ ಸಚಿವರಾದ ಅಶ್ವಿನಿ ಚೌಬೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ಭತ್ತ ಖರೀದಿ ಅಕ್ಟೋಬರ್ 1ರಿಂದ ಆರಂಭವಾಗುತ್ತದೆ ಆದರೆ ಕೇಂದ್ರ ಸರ್ಕಾರ ಪಂಜಾಬ್ ಮತ್ತು ಹರಿಯಾಣದಲ್ಲಿ ಖಾರಿಫ್ ಭತ್ತ ಖರೀದಿಯನ್ನು ಅಕ್ಟೋಬರ್ 11 ರವರೆಗೆ ಮುಂದೂಡಿರುವುದಾಗಿ ಘೋಷಿಸಿತ್ತು. ಈ ಹಿನ್ನೆಲೆ ರೈತರು ಪ್ರತಿಭಟನೆ ನಡೆಸಿದ್ದರು.