ನವದೆಹಲಿ: ಸಂಸತ್ನಲ್ಲಿ ಅಂಗೀಕಾರ ಪಡೆದಿರುವ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಮೂರು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಅಂಕಿತ ಹಾಕಿದ್ದಾರೆ.
ಭಾರತೀಯ ನ್ಯಾಯ (ಎರಡನೆಯ) ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮಸೂದೆ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆಗಳಿಗೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ. ಈ ಮಸೂದೆಗಳು ಕಾನೂನಾಗಿ ಪರಿವರ್ತನೆಗೊಂಡಿವೆ.
ಹೊಸ ಕ್ರಿಮಿನಲ್ ಕಾನೂನು ಮಸೂದೆಗಳ ವಿಚಾರವಾಗಿ ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ಮಸೂದೆಗಳು ದೇಶದ ಜನರನ್ನು ವಸಾಹತು ಕಾಲದ ಮನಃಸ್ಥಿತಿಯಿಂದ ಮುಕ್ತಗೊಳಿಸಲಿವೆ ಎಂದು ಹೇಳಿದ್ದರು.
ಈ ಮೂರು ಮಸೂದೆಗಳು ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ಬರಲಿವೆ. ‘ಬ್ರಿಟಿಷರ ಕಾಲದಲ್ಲಿ ಈ ಮೂರು ಕಾನೂನುಗಳನ್ನು ರಚಿಸಲಾಯಿತು. ಈ ಕಾನೂನುಗಳನ್ನು ತೆಗೆದುಹಾಕುವವರೆಗೆ ಬ್ರಿಟನ್ನಿನ ಕಾನೂನುಗಳು ದೇಶದಲ್ಲಿ ಮುಂದುವರಿಯುತ್ತವೆ’ ಎಂದು ಶಾ ತಿಳಿಸಿದ್ದರು.