ಭುವನೇಶ್ವರ್, – ಒಡಿಶಾ ಸ್ಟಾಫ್ ಸೆಲೆಕ್ಷನ್ ಕಮೀಷನರ್ ಅವರ ಆಪ್ತ ಕಾರ್ಯದರ್ಶಿ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ಜಾಗೃತ ದಳದ ಅಧಿಕಾರಿಗಳು ಸುಮಾರು 3.79 ಕೋಟಿ ಮೌಲ್ಯದ ಸ್ಥಿರ-ಚರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.
ಆಪ್ತ ಕಾರ್ಯದರ್ಶಿ ಬಿರಾಂಚಿ ನಾರಾಯಣ್ಸಾಹು ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ದೂರುಗಳು ಕೇಳಿ ಬಂದಿದ್ದವು. ಅದರ ಪ್ರಕಾರ ಮಾಹಿತಿ ಕಲೆ ಹಾಕಿದ ಜಾಗೃತ ದಳದ ಅಧಿಕಾರಿಗಳು ಇಂದು ಬೆಳಗ್ಗೆ ನಾಲ್ಕು ಡಿವೈಎಸ್ಪಿಗಳು 13 ಇನ್ಸ್ಪಕ್ಟರ್ಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರು ಸ್ಥಳಗಳಲ್ಲಿ ದಾಳಿ ನಡೆಸಿದೆ.ಭುವನೇಶ್ವರ್, ಕಥಕ್ ಸೇರಿದಂತೆ ವಿವಿಧ ಕಡೆ ತಪಾಸಣಾ ಕಾರ್ಯಗಳು ಮುಂದುವರೆದಿವೆ. ನಿಲಾಧಾರಿವಿಹಾರ್ನಲ್ಲಿ ಎರಡು ಮಹಡಿಗಳ ಕಟ್ಟಡ, ಭಕ್ತಿವಿಹಾರ್ನಲ್ಲಿ ಎರಡು ಕಟ್ಟಡಗಳು, ಭುವನೇಶ್ವರ್ ಮತ್ತು ಗೋಡಿಬಂಧಕಟಕ್ನಲ್ಲಿ 14 ಪ್ಲಾಟ್ಗಳು ಸೇರಿದಂತೆ ಅಪಾರ ಸ್ಥಿರಾಸ್ತಿಗಳು, 56 ಲಕ್ಷ ವಿಮಾ ಹೂಡಿಕೆ, 12 ಲಕ್ಷ ನಗದು, ಸಂಬಂಧಿಕರ ಮನೆಯಲ್ಲಿ 13 ಲಕ್ಷ ನಗದು, 1.5 ಕೆಜಿ ಚಿನ್ನಾಭರಣ ಸೇರಿದಂತೆ ಅಪಾರ ಪ್ರಮಾಣದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜತೆಯಲ್ಲಿ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳ ಪ್ರವೇಶ ಪತ್ರಗಳು, ಅವರು ಸಾಹು ಹೆಸರಿಗೆ ಠೇವಣಿ ಮಾಡಿರುವ ಬ್ಯಾಂಕ್ನ ದಾಖಲಾತಿಗಳು ಮನೆಯಲ್ಲಿ ಪತ್ತೆಯಾಗಿವೆ. ತನಿಖೆ ಮುಂದುವರೆದಿದೆ.