ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಶ್ರೀರಾಮ ಜ್ಯೋತಿ ಬೆಳಗಿ ದೀಪಾವಳಿ ಆಚರಿಸುವಂತೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈಗ ಜನರು ಶ್ರೀರಾಮನ ಬಗ್ಗೆ ಭಜನೆಗಳನ್ನು ಹಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವಂತೆ ಇನ್ನೊಂದು ಮನವಿ ಮಾಡಿದ್ದಾರೆ.
ಭಾನುವಾರ ತಮ್ಮ ಮನ್ ಕೀ ಬಾತ್ನಲ್ಲಿ ಮಾತನಾಡಿದ ಅವರು, ‘ನಮ್ಮಲ್ಲಿ ಸಾಕಷ್ಟು ಅನುಭವವಿರುವ ಹಾಗೂ ಉದಯೋನ್ಮುಖ ಕಲಾವಿದರು ಭಜನೆಗಳನ್ನು ರಚಿಸಿ ಹಾಡುವವರಿದ್ದಾರೆ. ಅವರು ಶ್ರೀರಾಮನ ಕುರಿತು ಅಥವಾ ಅಯೋಧ್ಯೆಯ ಕುರಿತು ಭಜನೆಗಳನ್ನು ರಚಿಸಿದ್ದರೆ, ಅವುಗಳನ್ನು ಹಾಡಿದ್ದರೆ ಅಥವಾ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸೃಜನಶೀಲ ಕೃತಿಗಳನ್ನು ರಚಿಸಿದ್ದರೆ ಅವುಗಳನ್ನು #ShriRamBhajan ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಿ. ಆಗ ಅವು ಒಂದೇ ಕಡೆ ಎಲ್ಲರಿಗೂ ಸಿಗುತ್ತವೆ ಮತ್ತು ಭಕ್ತಿಯ ಧಾರೆ ಹರಿಸುತ್ತವೆ’ ಎಂದು ಹೇಳಿದ್ದಾರೆ.
‘ರಾಮಮಂದಿರ ಉದ್ಘಾಟನೆಯ ಬಗ್ಗೆ ದೇಶದಲ್ಲಿ ತುಂಬಾ ಉತ್ಸಾಹ ಹಾಗೂ ಕುತೂಹಲವಿದೆ. ಅದನ್ನು ಭಕ್ತಿ ಹಾಗೂ ಭಾವನೆಯ ಸ್ರೋತವಾಗಿ ಹರಿಸೋಣ. ಕಳೆದ ಕೆಲ ದಿನಗಳಿಂದ ಅನೇಕ ಹೊಸ ಹೊಸ ಹಾಡುಗಳು ಹಾಗೂ ಭಜನೆಗಳು ಅಯೋಧ್ಯೆಯ ಕುರಿತು ರಚನೆಯಾಗಿವೆ. ಅವುಗಳೆಲ್ಲ ಒಂದೇ ಕಡೆ ಸಿಗುವಂತೆ ಆಗಲಿ’ ಎಂದು ತಿಳಿಸಿದ್ದಾರೆ.