ಇಂಪಾಲ್: ಹಿಂಸಾಚಾರ ಪೀಡಿತ ಮಣಿಪುರಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪೊಲೀಸರು ತಡೆದಿದ್ದಾರೆ. ಜನಾಂಗೀಯ ಹಿಂಸಾಚಾರದಿಂದ ಹಾನಿಗೊಳಗಾದ ಚುರಾಚಂದ್ಪುರಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸರು ಅವರನ್ನು ಹಾಗೂ ಅವರ ಬೆಂಗಾವಲು ವಾಹನವನ್ನು ತಡೆದಿದ್ದಾರೆ. ಗುರುವಾರ (ಇಂದು) ಬೆಳಗ್ಗೆ ಅವರು ದೆಹಲಿಯಿಂದ ಮಣಿಪುರಕ್ಕೆ ಬಂದಿದ್ದರು. ಈ ವೇಳೆ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ತೆರಳುವ ವೇಳೆ ಪೊಲೀಸರು ತಡೆದಿದ್ದಾರೆ.
ಜೂನ್ 29 ರಿಂದ 2 ದಿನಗಳ ಕಾಲ ಮಣಿಪುರಕ್ಕೆ ಭೇಟಿ ನೀಡಿ, ಹಿಂಸಾಚಾರ ಪೀಡಿತ ಪ್ರದೇಶದ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲು ತೀರ್ಮಾನಿಸಿದ್ದರು. ಈ ವೇಳೆ ಜನಾಂಗೀಯ ಘರ್ಷಣೆಯಿಂದ ನಿರಾಶ್ರಿತರಾದ ಜನರೊಂದಿಗೆ ಸಂವಾದಕ್ಕೆ ಯೋಜಿಸಲಾಗಿತ್ತು. ಮಣಿಪುರದಲ್ಲಿ ಎಸ್ಟಿ ಮೀಸಲಾತಿ ವಿಚಾರವಾಗಿ ಮೈತೇಯ್ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದರಿಂದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮೈತೇಯ್ ಹಾಗೂ ಕುಕಿ ಬುಡಕಟ್ಟು ಜನಾಂಗದ ನಡುವಿನ ಘರ್ಷಣೆಯಲ್ಲಿ ಇಲ್ಲಿಯ ವರೆಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇಂಫಾಲದಿಂದ 20 ಕಿಮೀ ದೂರದಲ್ಲಿರುವ ಬಿಷ್ಣುಪುರದಲ್ಲಿ ಭದ್ರತಾ ಕಾರಣಗಳಿಂದ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನವನ್ನು ತಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚುರಾಚಂದಪುರಕ್ಕೆ ರಸ್ತೆ ಮಾರ್ಗವಾಗಿ ಚಲಿಸುವ ಬದಲು ಹೆಲಿಕಾಪ್ಟರ್ ಮೂಲಕ ತೆರಳುವಂತೆ ರಾಹುಲ್ ಅವರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.