ನಾಗಪುರ: ದೇಶದಲ್ಲಿ ಶೀಘ್ರದಲ್ಲೇ ಸಂಪೂರ್ಣ ಎಥನಾಲ್ ಇಂಧನದಿಂದ ಸಂಚರಿಸುವ ವಾಹನಗಳು ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾಗಪುರದಲ್ಲಿ ಮರ್ಸಿಡೆಸ್ ಬೆಂಜ್ ಕಂಪನಿಯ ಎಲೆಕ್ಟ್ರಿಕ್ ವಾಹನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಲೀಟರ್ ಎಥನಾಲ್ ಗೆ 60 ರೂಪಾಯಿ ದರ ಇದ್ದು, ಪೆಟ್ರೋಲ್ ದರ 100 ರೂಪಾಯಿ ದಾಟಿದೆ. ಎಥನಾಲ್ ಶೇಕಡ 40ರಷ್ಟು ವಿದ್ಯುತ್ ಉತ್ಪಾದನೆ ಮಾಡುವುದರಿಂದ ಪ್ರತಿ ಲೀಟರ್ ಸರಾಸರಿ ದರ 15 ರೂಪಾಯಿ ಆಗಲಿದೆ ಎಂದು ತಿಳಿಸಿದ್ದಾರೆ.
ಸಂಪೂರ್ಣವಾಗಿ ಎಥನಾಲ್ನಿಂದ ಚಾಲನೆಯಾಗುವ ವಾಹನಗಳನ್ನು ಟಿವಿಎಸ್, ಹೀರೋ ಸ್ಕೂಟರ್, ಬಜಾಜ್ ಕಂಪನಿಗಳು ತಯಾರಿಸಲಿದ್ದು, ಶೀಘ್ರವೇ ವಾಹನಗಳು ಮಾರುಕಟ್ಟೆಗೆ ಬರಲಿವೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಹೈಎಂಡ್ ಕಾರುಗಳು, ಆಟೋ ರಿಕ್ಷಾ, ಸೇರಿದಂತೆ ಇತರ ಕೆಲ ವಾಹನಗಳು ಸಂಪೂರ್ಣ ಎಥೆನಾಲ್ ಚಾಲಿತ ವಾಹನಗಳಾಗಿ ಬಿಡುಗಡೆಯಾಗಲಿದೆ. ಇದಕ್ಕೆ ಮುಖ್ಯ ಕಾರಣ ಸದ್ಯ ಭಾರತದಲ್ಲಿ ಎಥೆನಾಲ್ ಉತ್ಪಾದನೆ ವೇಗವಾಗಿ ಹೆಚ್ಚುತ್ತಿದೆ. ಆದರೆ ಒಂದೇ ಸಮನೆ ಎಲ್ಲಾ ವಾಹನಗಳನ್ನು ಸಂಪೂರ್ಣ ಎಥೆನಾಲ್ ಇಂಧನಗಳಾದರೆ ಎಥೆನಾಲ್ ಕೊರತೆ ಎದುರಾಗಲಿದೆ. ಹೀಗಾಗಿ ರೈತರು ಎಥೆನಾಲ್ ಉತ್ಪಾದನೆ ಮಾಡುವ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಉತ್ತಮ ಲಾಭ ಪಡೆಯಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಎಥೆನಾಲ್ ಸಕ್ಕರೆ ಅಥವಾ ಬೆಲ್ಲ ಉತ್ಪಾದನೆ ವೇಳೆ ಕಬ್ಬಿನಿಂದ ಸಿಗುವ ಉಪ ಉತ್ಪನ್ನವಾಗಿದೆ. ಇದರ ಬಳಕೆಯಿಂದ ಎಥೆನಾಲ್ಗೆ ಹೆಚ್ಚಿನ ಬೇಡಿಕೆ ಲಭ್ಯವಾಗಿ ರೈತರಿಗೆ ಆದಾಯದ ಮತ್ತೊಂದು ಮೂಲವಾಗಿ ಹೊರಹೊಮ್ಮಲಿದೆ. ಜೊತೆಗೆ ಇದು ಪರಿಸರ ಸ್ನೇಹಿ ಇಂಧನ. ಇದರ ಬಳಕೆಯಿಂದ ಸಹಜವಾಗಿಯೇ ಅಷ್ಟುಪ್ರಮಾಣದ ಪೆಟ್ರೋಲ್ನಿಂದ ಹೊರಹೊಮ್ಮುತ್ತಿದ್ದ ಮಾಲಿನ್ಯ ಕಡಿಮೆಯಾಗಲಿದೆ. 2030ರಲ್ಲಿ ಇದರ ಜಾರಿಗೆ ಉದ್ದೇಶಿಸಲಾಗಿತ್ತು. ಆದರೆ 7 ವರ್ಷ ಮೊದಲೇ ಗುರಿ ತಲುಪಲಾಗಿದ್ದು, ‘ಇ-20’ ಪೆಟ್ರೋಲ್ ಬಳಕೆಗೆ ಲಭ್ಯವಾಗಲಿದೆ.
ಕರ್ನಾಟಕ ಏಷ್ಯಾದಲ್ಲಿ ಅತೀ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುವ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಾಗಿ ಮಾಡಲಾಗುತ್ತಿದೆ. ಮುಂದಿನ 5 ವರ್ಷದಲ್ಲಿ 10 ಪಟ್ಟು ಹೆಚ್ಚಿಸಲು ಗುರಿ ಇಟ್ಟುಕೊಂಡಿದೆ.