ನಾಗ್ಪುರ: ಮುಂಬೈಯಿಂದ ರಾಂಚಿಗೆ ಪ್ರಯಾಣಿಕರನ್ನು ಹೊತ್ತ ವಿಮಾನದಲ್ಲಿ ಸೋಮವಾರ ತಡರಾತ್ರಿ ಪ್ರಯಾಣಿಕರೊಬ್ಬರಿಗೆ ಆರೋಗ್ಯ ಕಾಡಿದ್ದು ಇದ್ದಕ್ಕಿದ್ದಂತೆ ರಕ್ತ ವಾಂತಿ ಮಾಡಲು ಆರಂಭಿಸಿದ್ದಾರೆ.
ಕೂಡಲೇ ವಿಮಾನವನ್ನು ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿ ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಯಾಣಿಕ ಮೃತಪಟ್ಟಿರುವ ಘಟನೆಯೊಂದು ಇಂಡಿಗೋ ವಿಮಾನದಲ್ಲಿ ನಡೆದಿದೆ.
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದೇವಾನಂದ್ ತಿವಾರಿ ಕ್ಷಯರೋಗದಿಂದ ಬಳಲುತ್ತಿದ್ದರು. ಇವರು ರಕ್ತ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ, ಕೂಡಲೇ ಸಿಬ್ಬಂದಿಗಳು ವಿಮಾನಯಾನ ಸಂಸ್ಥೆಗೆ ಮಾಹಿತಿ ನೀಡಿ ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿ ಪ್ರಯಾಣಿಕನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಈ ವೇಳೆ ತಪಾಸಣೆ ನಡೆಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.