ನಾಗಪುರ: ಟೀ ಕೊಡಲಿಲ್ಲ ಎಂದು ಕೋಪಗೊಂಡ ವೈದ್ಯರೊಬ್ಬರು ಸರ್ಜರಿಯನ್ನು ಅರ್ಧದಲ್ಲಿಯೇ ಬಿಟ್ಟು ಆಪರೇಷನ್ ಥಿಯೇಟರ್ನಿಂದ ಹೊರ ನಡೆದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನ. 3ರಂದು ನಡೆದಿದೆ. ಈ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಚರ್ಚೆಗೆ ಕಾರಣವಾಗಿದ್ದು, ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆ ದಿನದಂದು ಎಂಟು ಮಂದಿ ಮಹಿಳೆಯರು ಕುಟುಂಬ ಯೋಜನೆ ಸರ್ಜರಿಗೆ ಒಳಗಾಗಬೇಕಿತ್ತು.
ನಾಲ್ವರು ಮಹಿಳೆಯರಿಗೆ ವ್ಯಾಸೆಕ್ಟಮಿ ಸರ್ಜರಿ ಪೂರ್ಣಗೊಳಿಸಿದ ವೈದ್ಯ ಡಾ ತೇಜರಂಗ್ ಭಲಾವಿ, ಇನ್ನು ಉಳಿದ ನಾಲ್ಕು ಮಹಿಳೆಯರಿಗೆ ಅನಸ್ತೇಷಿಯಾ ನೀಡಿದ್ದರು. ಆಯಾಸವಾಗಿದ್ದರಿಂದ ಟೀ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ ಎಷ್ಟು ಹೊತ್ತು ಕಳೆದರೂ ಆಸ್ಪತ್ರೆ ಸಿಬ್ಬಂದಿ ಟೀ ತಂದುಕೊಟ್ಟಿರಲಿಲ್ಲ. ಇದರಿಂದ ಕೋಪಗೊಂಡ ವೈದ್ಯ, ಉಳಿದ ನಾಲ್ಕು ಮಹಿಳೆಯರ ಸರ್ಜರಿ ಪೂರ್ಣಗೊಳಿಸದೆ ಆಪರೇಷನ್ ಥಿಯೇಟರ್ನಿಂದ ಹೊರ ಹೋಗಿದ್ದಾರೆ.
ಡಾ. ತೇಜರಂಗ್ ಭಲಾವಿ ಅಲ್ಲಿಂದ ಹೊರಟು ಹೋದ ನಂತರ ಆಸ್ಪತ್ರೆ ಆಡಳಿತವು ಜಿಲ್ಲಾ ವೈದ್ಯಕೀಯ ಅಧಿಕಾರಿಯನ್ನು ಸಂಪರ್ಕಿಸಿದೆ. ಅರವಳಿಕೆ ನೀಡಿ ಮಲಗಿಸಿದ್ದ ಬಾಕಿ ಮಹಿಳೆಯರ ಸರ್ಜರಿ ನಡೆಸಲು ಬೇರೊಬ್ಬ ವೈದ್ಯರನ್ನು ಕಳುಹಿಸಲಾಯಿತು. ಈ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ಆದೇಶ ನೀಡಿದೆ.