ಮುಂಬೈ: ಮಹಾರಾಷ್ಟ್ರ ಸರ್ಕಾರಕ್ಕೆ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯ ಭಯವಿದೆ. ಹಾಗಾಗೀ ಮೇ 1 ರಂದು ಔರಾಂಗಾಬಾದ್ ರ್ಯಾಲಿಯಲ್ಲಿ ನಿಯಮ ಉಲ್ಲಂಘಿಸಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಆರೋಪಿಸಿದ್ದಾರೆ.
ರ್ಯಾಲಿಯಲ್ಲಿ ನಿಯಮ ಉಲ್ಲಂಘನೆಗಾಗಿ ರಾಜ್ ಠಾಕ್ರೆಯನ್ನು ಬಂಧಿಸಬೇಕು ಎಂದು ನಿರುಪಮ್ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಉಂಟಾಗದಂತೆ ತಡೆಯಲು ರಾಜ್ ಠಾಕ್ರೆಯ ಬಂಧನ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ ಠಾಕ್ರೆ ವಿರುದ್ಧ ಕ್ರಮ ಕೈಗೊಳ್ಳದ ಮುಂಬೈ ಪೊಲೀಸರ ವಿರುದ್ಧ ಸಂಜಯ್ ನಿರುಪಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ ಠಾಕ್ರೆ ವಿರುದ್ಧ ಎರಡು ನ್ಯಾಯಾಲಯಗಳು ಜಾಮೀನು ರಹಿತ ವಾರೆಂಟ್ ನೀಡಿದ್ದರೂ ಮುಂಬೈ ಪೊಲೀಸರು ಏಕೆ ಏನನ್ನು ಮಾಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ರಾಜ್ಯ ಸರ್ಕಾರ ರಾಜ್ ಠಾಕ್ರೆಗೆ ಹೆದರಿದಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಶಿವಸೇನೆಗೆ ಯಾರೂ ಹಿಂದುತ್ವವನ್ನು ಕಲಿಸುವ ಅವಶ್ಯಕತೆ ಇಲ್ಲ: ರಾಜ್ ಠಾಕ್ರೆಗೆ ಸಂಜಯ್ ರಾವುತ್ ಟಾಂಗ್!
ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಮಹಾರಾಷ್ಟ್ರ ಸರ್ಕಾರ ಯಾರಿಗೂ ಹೆದರದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಜಯ್ ನಿರುಪಮ್ ಒತ್ತಾಯಿಸಿದ್ದಾರೆ.