ಮಹಾರಾಷ್ಟ್ರ : ಸಹೋದರಿಯರಿಬ್ಬರು ಓಡುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉರಳ್ ಪೊಲೀಸ್ ಠಾಣಾ ವ್ಯಾಪ್ತಿಯ ಮನಾರ್ಖೇಡ್ ರೈಲು ನಿಲ್ದಾಣದಲ್ಲಿ ನಡೆದಿದೆ. ಇಬ್ಬರೂ ಸಹೋದರಿಯರು ಛತ್ತೀಸ್ಗಢ ಮೂಲದವರು ಎಂದು ತಿಳಿದುಬಂದಿದೆ. ಮುಂಬೈ-ಕೋಲ್ಕತ್ತಾ ಮಾರ್ಗದ ರೈಲಿನಿಂದ ಹಾರಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೇಬಿ ರಜಪೂತ್ ಮತ್ತು ಪೂಜಾ ಗಿರಿ ಮನೆಯಲ್ಲಿ ಜಗಳವಾಡಿಕೊಂಡು ಬಂದಿದ್ದರು ಎಂದು ಪ್ರಾಥಮಿಕ ತನಿಖೆಯ ಮೂಲಕ ತಿಳಿದು ಬಂದಿದೆ. ಬುಧವಾರ ರಾತ್ರಿ 9.30ರ ಸುಮಾರಿಗೆ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಬ್ಬರೂ ಸಮವಸ್ತ್ರದಲ್ಲಿದ್ದದ್ದು ಗೊತ್ತಾಗಿದೆ. ಸ್ಥಳಕ್ಕೆ ಅಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಬೇಬಿ ರಜಪೂತ್ ಮತ್ತು ಪೂಜಾ ಗಿರಿ ಪರಸ್ಪರ ಸೋದರ ಸಂಬಂಧಿಗಳಾಗಿದ್ದು, ನಾಲ್ಕು ದಿನಗಳ ಹಿಂದೆ ಇಬ್ಬರು ಬಾಲಕಿಯರು ಐಟಿಐಗೆ ಹೋಗುವುದಾಗಿ ಹೇಳಿ ಮನೆ ಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಆದರೆ ಅವರಿಬ್ಬರೂ ಮನೆಗೆ ಹಿಂದಿರುಗಲಿಲ್ಲ. ಅವರ ಕುಟುಂಬ ಚಾಪಾ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಮುಂಬೈ-ಕೋಲ್ಕತ್ತಾ ರೈಲಿನಲ್ಲಿ ಪೂಜಾ ಮತ್ತು ಬೇಬಿ ಪ್ರಯಾಣಿಸುತ್ತಿದ್ದಾಗ ಒಬ್ಬರ ನಂತರ ಒಬ್ಬರಂತೆ ರೈಲಿನಿಂದ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.